ಬೆಂಗಳೂರು ಬೆಂಗಳೂರೇ ಆದರೆ ಬೆಚ್ಚುವುದೇಕೆ?

ಏನಕೇನ ಪ್ರಕಾರೇಣ ಪ್ರಸಿದ್ಧ ಪುರುಷನಾಗಿಬಿಡು ಎಂಬ ಒಂದು ವ್ಯಂಗ್ಯದ ಮಾತಿದೆ. ನಾನೀಗ ಆಗಿಬಿಟ್ಟಿದ್ದೇನೆ. ಏನನ್ನೂ ಹರಿಯದೆ. ಏನನ್ನೂ ಕೆಡವದೆ. ಏನನ್ನೂ ಬರೆಯದೆ. ಲಂಡನ್ನಿನಿಂದ ಬಿಬಿಸಿಯವರು ಮೂರು ಬಾರಿ ಕರೆದು ವಿಚಾರಿಸಿಕೊಂಡರು. `ಯುಎಸ್‌ಎ ಟುಡೆ' ಕರೆದು ಅರ್ಧ ಗಂಟೆ ಕಾಲ ಮಾತಾಡಿಸಿದರು. `ನ್ಯೂಯಾರ್ಕ್‌ ಟೈಂಸ್‌' ನವರು ಇಲ್ಲಿಯೇ ಇರುವ ಪತ್ರಕರ್ತರೊಬ್ಬರಿಂದ ಬೇಕಾದ ಮಾಹಿತಿ ಪಡೆದರು. ಇನ್ನು ಉಳಿದ ನಮ್ಮವರೇ ಬಿಡಿ: ಎನ್‌ಡಿಟಿವಿ, ಟೈಮ್ಸ್‌ ನಾನಿದ್ದಲ್ಲೇ ಬಂದು, ತಮ್ಮಲ್ಲಿಗೂ ಕರೆಸಿಕೊಂಡು ಮಾತಾಡಿಸಿದರು. ಹಾಸ್ಯದಲ್ಲಿ ನಾನೀಗ ಮಾತಾಡುತ್ತಿದ್ದರೂ ನಿಮಗೆ ಕೊಚ್ಚಿಕೊಂಡಂತೆ ಕಂಡೀತೆಂದು ಉಳಿದ ವಿವರಗಳನ್ನು ಬಿಟ್ಟಿದ್ದೇನೆ.

ಕಾರಣ ಇಷ್ಟೆ: `ಬೆಂಗಳೂರನ್ನು ಬೆಂಗಳೂರು ಎಂದು ಕರೆಯುವಂತೆ, ಬ್ಯಾಂಗಲೂರ್‌ ಎನ್ನದಂತೆ ಒತ್ತಾಯಿಸಿದ್ದು ನೀವಂತೆ ಹೌದೆ?' ಎನ್ನುವುದರಿಂದ ಶುರುವಾಗುವ ಪ್ರಶ್ನೆಯ ಮುಂದಿನ ಪ್ರಶ್ನೆಯನ್ನು ನಾನೇ ಊಹಿಸಿ ಮುಂದಾಗಿ ಉತ್ತರಿಸುತ್ತಿದ್ದೆ. `ನಿಜವೇ, ಬೆಂಗಳೂರು ಎಂದು ಬೆಂಗಳೂರನ್ನು ಕರೆದಾಕ್ಷಣ ಇನ್‌ಫ್ರಾಸ್ಟ್ರಕ್ಚರ್‌ ಡೆವಲೆಪ್‌ ಮೆಂಟ್‌ ಆದಂತೇನೂ ಅಲ್ಲ' ಇತ್ಯಾದಿ. ಬ್ಯಾಂಗಲೂರ್‌ ಇಡೀ ಜಗತ್ತಿನಲ್ಲಿ ಬ್ರಾಂಡ್‌ ಆಗಿರುವಾಗ ಏಕಿದನ್ನು ನಿಮ್ಮ ಸರ್ಕಾರ ಬದಲು ಮಾಡಿ ಬ್ರಾಂಡ್‌ನಿಂದಾಗಿ ಒದಗುವ ಎಲ್ಲ ಐಶ್ವರ್ಯವನ್ನು ಕಳೆದುಕೊಳ್ಳಬೇಕು? `ನಿಜವೇ, ಆದರೆ ನೋಡಿ ಮಿಸ್ಟರ್‌, ನಮ್ಮ ಹವಾದಿಂದಾಗಿ ಬ್ಯಾಂಗಲೂರ್‌ ಬ್ರಾಂಡ್‌ ಆಯಿತು; ಬ್ರಾಂಡ್‌ ಆದದ್ದರಿಂದ ಹವಾ ಕೆಟ್ಟಿತು. ಎಲ್ಲೆಲ್ಲೂ ಕಾರುಗಳಾಗಿ ಈಗ ಹೊಗೆಯೋ ಹೊಗೆ. ಮೂಗು ಮುಚ್ಚಿಕೊಂಡು ಓಡಾಡುವಂತೆಯೂ ಇಲ್ಲ. ಅಷ್ಟು ಜನ.'

ಬೆಂಗಳೂರಿನವರೇ ಆದ ಒಬ್ಬರು ತಪ್ಪು ತಪ್ಪು ಇಂಗ್ಲಿಷಿನಲ್ಲಿ ನನಗೆ ಬೈದು ಎರಡು ಕಾಗದ ಬರೆದಿದ್ದಾರೆ. `ಯಾಕ್ರೀ ನಾನು ಕನ್ನಡ ಕಲೀಬೇಕು? ನಿಮ್ಮ ಐವತ್ತು ಮಿಲಿಯನ್‌ ಜನರ ಒಪ್ಪಿಗೆ ಪಡೆದು ಮಾಡಿರೋ ಬದಲಾವಣೆಯೇನ್ರಿ ಇದು? ಅವರು ಏನೇ ಕರೆದರೂ ನಾವು ಕೆಲವರು ಯಾಕೆ ಬ್ಯಾಂಗಲೂರ್‌ ಅಂತ ಕರೀಬಾರದು?' ಗೆಳೆಯ ಆಶೀಶ್‌ ನಂದಿಯವರೂ, ಗೆಳೆಯರೂ ಹಿರಿಯರೂ ಆದ ಶಾರದಾ ಪ್ರಸಾದರೂ ಈ ಮನುಷ್ಯನಂತೆ ಕುಪಿತರಾಗದೆ ಅದೇ ವಾದ ಮಾಡುತ್ತಾರೆ: `ಇರುವುದು ಒಂದೇ ಸಿಟಿಯಲ್ಲ; ಇನ್ನೊಂದು ಸಿಟಿಯೂ ಇದೆ. ಬೆಂಗಳೂರೂ ಇರಲಿ, ಬ್ಯಾಂಗಲೂರ್‌ ಕೂಡ ಇರಲಿ'. ನನ್ನ ಉದಾರವಾದೀ ಮನಸ್ಸಿಗೆ ಈ ವಾದ ಹಿಡಿಸುತ್ತದೆ. ಸಂಕೋಚದಿಂದಲೇ ಅವರಿಗೆ ಹೇಳಲು ಪ್ರಯತ್ನಪಡುತ್ತೇನೆ:

`ನೋಡಿ, ಬ್ಯಾಂಗಲೂರ್‌ಗೆ ಇನ್ನೊಂದು ಬೆಂಗಳೂರು ಇದೆ ಎಂದು ಗೊತ್ತೇ ಇಲ್ಲ. ರಾಜ್‌ಕುಮಾರ್‌ ಅಪಹರಣ ವಾದಾಗ, ತೀರಿಕೊಂಡಾಗ ಅವರ ಕಾರುಗಳ ಮೇಲೆ ಜನ ಕಲ್ಲು ತೂರಿದಾಗ, ಬಸ್ಸು ಸುಟ್ಟಾಗ ಬೆಂಗಳೂರು ಕೂಡ ಇರುವುದು ಗೊತ್ತಾಗುತ್ತದೆ. ಆದರೆ ಅದೊಂದು ಕ್ಷಣ ಮಾತ್ರ. ಹಿಂದೆ ಬಂದವರೆಲ್ಲ ಕನ್ನಡವನ್ನು ಮಾತಾಡಲಾದರೂ ಕಲಿಯುತ್ತ ಇದ್ದರು. ಮಾಸ್ತಿ, ಪುತಿನರಂತಹ ತಮಿಳು ಮಾತಾಡುವವರು ಕನ್ನಡದ ಶ್ರೇಷ್ಠ ಲೇಖಕರಾದರು. ಈಗಿನವರ ಹೆಂಡಂದಿರು ಕೂಡ ಕನ್ನಡ ಕಲಿಯಬೇಕಾಗಿಲ್ಲ. ತರಕಾರಿಯವನ ಹತ್ತಿರ ಅವರು ಚೌಕಾಸಿ ಮಾಡಬೇಕಾಗಿಲ್ಲ. ಫುಡ್‌ ಮಾಲ್‌ಗಳು, ಫುಡ್‌ ವರ್ಲ್ಡ್‌ಗಳು ಎಲ್ಲೆಲ್ಲೂ ಇವೆ. ಚೌಕಾಸಿ ಮಾಡಬಲ್ಲ, ಹರಟೆ ಹೊಡೆದು ಕಾಲ ಕಳೆಯಬಲ್ಲ ಸಣ್ಣ ಪುಟ್ಟ ಅಂಗಡಿಗಳೆಲ್ಲವೂ ಮುಚ್ಚಿ ಹೋಗಲಿವೆ. ತಾವಿರುವ ಜಾಗ ತಮ್ಮದೇ ಆದರೆ, ಅದನ್ನು ಮಾರಿಕೊಂಡರೆ ಅವರು ಕೆಲಸವಿಲ್ಲದ ಕೋಟ್ಯಾಪತಿಗಳಾಗುತ್ತಾರೆ. ಬಾಡಿಗೆಗೆ ಹಿಡಿದವರಾದರೆ ದೆಸೆ ದಿಕ್ಕಿಲ್ಲದ ಬಡಪಾಯಿಗಳಾಗುತ್ತಾರೆ. ಈಗ ಇಂಗ್ಲಿಷಿನಲ್ಲೇ ಎಲ್ಲ ಹೆಂಗಸರು ಬ್ರಿಂಜಾಲ್‌, ಲೇಡೀಸ್‌ ಫಿಂಗರ್‌, ಬನಾನಾ ಕೊಳ್ಳಬಹುದು. ಇನ್ನು ಅವರ ಮಕ್ಕಳಿಗಂತೂ ಇಲ್ಲಿನ ಮಕ್ಕಳ ಸಂಸರ್ಗವೇ ಇಲ್ಲ. ಅವರು ಹೋಗುವ ಸ್ಕೂಲೇ ಬೇರೆ, ಕನ್ನಡದ ಮಕ್ಕಳು ಹೋಗುವ ಸ್ಕೂಲೇ ಬೇರೆ. ಪ್ಲೀಸ್‌, ಇನ್ನೊಂದು ಮಾತು. ಕನ್ನಡದ ಮಕ್ಕಳು ಎಂದರೆ ಬಡವರ ಮಕ್ಕಳು ಎಂದು ಅರ್ಥ ಮಾಡಿ ಕೊಳ್ಳಬೇಕು. ಕನ್ನಡದವರ ಮಕ್ಕಳು ಎಂದುಕೊಳ್ಳಕೂಡದು. ಯಾಕೆಂದರೆ ಇವರ ಮಕ್ಕಳೂ ಕನ್ನಡ ಮಾತಾಡಬೇಕಾಗಿಲ್ಲ. ವರ್ಷಕ್ಕೆ ಒಂದು ಲಕ್ಷ ಫೀಸ್‌ ಕೊಟ್ಟು ಒಂದು-ಒಂದೂವರೆ ಗಂಟೆ ಪ್ರಯಾಣ ಮಾಡಿ ಕನ್ನಡದ ಮಕ್ಕಳ ಸ್ಪರ್ಶವಾಗದಂತೆ, ಹೆಣ್ಣು ಮಕ್ಕಳ ತಲೆಯಲ್ಲಿ ಬಡವರ ಮಕ್ಕಳ ಹೇನು ಸೇರದಂತೆ ಇವರು ಬದುಕುತ್ತಾರೆ. ಇದು ಬ್ಯಾಂಗಲೂರ್‌.

ಈ ಸಂಕಟದಲ್ಲಿ ಎಲ್ಲರೂ ಒಂದು ಕನ್ನಡ ಶಬ್ದವನ್ನಾದರೂ ಮಾತಾಡಬೇಕಾಗಿ ಬರಲಿ ಎಂದು ಬೆಂಗಳೂರನ್ನು ಬೆಂಗಳೂರು ಅನ್ನುವಂತೆ ನಾನು ಧರಂಸಿಂಗ್‌ ಮುಖ್ಯಮಂತ್ರಿ ಯಾಗಿದ್ದಾಗ ಕೇಳಿಕೊಂಡೆ- ಅಷ್ಟೆ' ಇತ್ಯಾದಿ ಹೇಳುತ್ತೇನೆ. ಸರಿ. ಬೆಂಗಳೂರು ಎಂದು ಹೆಸರು ಬದಲಾಯಿಸಿದರೂ ಹೊರಗಿನ ಹಲವರಿಗೆ `ಳ'ಕಾರ ಸಾಧ್ಯವಿಲ್ಲವಲ್ಲ ಎಂದು ಹಿರಿಯರೊಬ್ಬರು ಹೇಳುತ್ತಾರೆ. ಆಗ ನನಗೆ ನನ್ನ ಆಯುಷ್ಯದ ಬಹುಪಾಲನ್ನು ಇಂಗ್ಲಿಷಿನ `ಎ'ಗೂ ನಮ್ಮ ಉಚ್ಚಾರದ `ಯೆ'ಗೂ ನಡುವಿನ ವ್ಯತ್ಯಾಸ ಗೊತ್ತಾಗುವಂತೆ ಮಾತಾಡಲು ಹೆಣಗಿದ್ದು ನೆನಪಾಗುತ್ತದೆ. ಇಂಗ್ಲಿಷ್‌ ಮಾತಾಡುವವರೂ ಕೊಂಚ ಕಷ್ಟಪಡಲಿ ಬಿಡಿ ಎನ್ನುತ್ತೇನೆ. ಹೀಗೆಲ್ಲ ಕಷ್ಟಕೊಡಲು ಶುರು ಮಾಡಿದರೆ ಅವರು ತಮ್ಮ ಅಂಗಡಿಗಳನ್ನು ಮುಚ್ಚಿ ಹೋಗಿಬಿಡುತ್ತಾರೆ, ಜೋಕೆ! ನಮ್ಮ ಅಭಿವೃದ್ಧಿಗಾಗಿ ಕಾಲ್‌ ಸೆಂಟರ್‌ಗಳನ್ನು ನಡೆಸುವ ಪುಣ್ಯಾತ್ಮರನ್ನು ಕೆಣಕಬಾರದು ಎಂದಾಗ ನನ್ನ ಮೂರ್ಖ ಉತ್ತರವನ್ನು ಎಗ್ಗಿಲ್ಲದೆ ಕೊಡುತ್ತೇನೆ: `ಛೆ! ಛೆ! ವ್ಯಾಪಾರ ಮಾಡುವವರು ಜಾಣರು ಬಿಡಿ. ಲಾಭ ವಾಗುವುದಾದರೆ ಅವರು ಕನ್ನಡವನ್ನೂ ಕಲಿತುಬಿಡುತ್ತಾರೆ. ಐವತ್ತು ಮಿಲಿಯನ್‌, (ಐದು ಕೋಟಿ-ನಮ್ಮ ಭಾಷೆಯಲ್ಲಿ) ಜನ ಕನ್ನಡವನ್ನು ಓದಿ ಬರೆಯಬಲ್ಲವರಾದರೆ ಕನ್ನಡದ ಬೋರ್ಡನ್ನು ಅವರು ಹಾಕುವುದು ಮಾತ್ರವಲ್ಲ, ಕನ್ನಡವನ್ನು ಬಳಸಲೂ ಶುರುಮಾಡುತ್ತಾರೆ'- ಎನ್ನುತ್ತೇನೆ. ನಾವು ಇಂಗ್ಲಿಷ್‌ ಮಾತಾಡಿದಂತೆ ಅವರು ಕನ್ನಡ ಮಾತಾಡುತ್ತಾರೆ ಬಿಡಿ ಎನ್ನುತ್ತೇನೆ. ಈಗ ಕೂಡ ಇರುವುದು ಒಂದೇ ಕನ್ನಡವೆ? ಹಲವು ಕನ್ನಡಗಳು ಇಲ್ಲವೆ?
ಇಂಗ್ಲಿಷರು ಸೂರ್ಯ ಮುಳುಗದ ಚಕ್ರಾಪತಿಗಳಾ ಗಿದ್ದವರು ಅಲ್ಲವೆ? ತಮ್ಮದೇ ಇಂಗ್ಲಿಷನ್ನು ಎಲ್ಲರೂ ಮಾತಾಡಬೇಕೆಂದು ಅವರು ಇಷ್ಟಪಟ್ಟರೂ ಎಲ್ಲೆಲ್ಲಿ ಸೋತರು ನೋಡಿ. ತಮ್ಮದೇ ಅಮೆರಿಕಾದಲ್ಲಿ, ಆಸ್ಟ್ರೇಲಿಯಾದಲ್ಲಿ, ಲಂಡನ್ನಿನಲ್ಲೇ ಅವರು ಸೋತರಲ್ಲವೆ? ಜಾರ್ಜ್‌ ಬರ್ನಾರ್ಡ್‌ ಶಾ ಯಾಕೆ ಪಿಗಮಾಲಿಯನ್‌ ಬರೆಯಬೇಕಾಯಿತು, ಯೋಚಿಸಿ.

ಇಂಗ್ಲಿಷ್‌ ಜೊತೆ ನನ್ನದೇ ಹೆಣಗಾಟದ ಹಲವು ಕಥೆಗಳಲ್ಲಿ ಒಂದನ್ನು ಈಗ ಹೇಳುತ್ತೇನೆ. ಅರವತ್ತರ ದಶಕದ ಪ್ರಾರಂಭದಲ್ಲಿ ನಾನು ಇಂಗ್ಲೆಂಡಿಗೆ ಓದಲು ಹೋದೆ. ಆಗ ಮೈಸೂರು ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ೀಮಂತ ಇತಿಹಾಸ ಪಂಡಿತ ಫಣಿಕ್ಕರ್‌ರವರ ಅನುಮತಿ ಕೇಳಲು ಅವರ ಬಳಿ ನಾನು ಹೋದಾಗ `ಏನು ರೀಸರ್ಚ್‌ ಮಾಡಲು ಹೋಗುತ್ತಿದ್ದೀಯ?' ಎಂದು ಕೇಳಿದರು. `ಲಾರೆನ್ಸ್‌ ಮೇಲೆ' ಎಂದೆ. `ನಮ್ಮಲ್ಲೇ ಎಷ್ಟು ವಿಷಯವಿದೆ ಕಲಿಯಲು? ಕಾಳಿದಾಸ, ಭಾಸ, ಭವಭೂತಿ, ನಿಮ್ಮ ಭಾಷೆಯಲ್ಲೂ ಎಷ್ಟು ಸಾಹಿತಿಗಳು- ಇವರನ್ನೆಲ್ಲ ಚೆನ್ನಾಗಿ ಓದಿಕೊಳ್ಳದೆ ಅಲ್ಲೇನು ನೀನು ಲಾರೆನ್ಸ್‌ ಮೇಲೆ ರೀಸರ್ಚ್‌ ಮಾಡಿ ಹೊಸದು ಹೇಳುವುದಿದೆ?' ಎಂದರು. `ಏನೋ ಇದೆ' ಎಂದು ತಿಳಿ ಯುವ ಆಧುನಿಕತೆಯ ಗರ್ವದ ಧಾಟಿಯಲ್ಲಿ ಗೌರವ ದಿಂದಲೇ ನಾನು ವಾದಿಸಿದೆ. ಫಣಿಕ್ಕರ್‌ ಒಳ್ಳೆಯದಾಗಲಿ ನಿನಗೆ ಎಂದು ರಜಾ ಕೊಟ್ಟರು.
ಬರ್ಮಿಂಗಂಗೆ ಸಂಸಾರ ಸಮೇತ ಹೋದೆ. ಹೊಸ ಸೂಟು, ಆಗಿನ ಘನತೆಯ ಸಂಕೇತವಾದ ಉಲ್ಲನ್ನಿನ ಪಿನ್‌ ಸ್ಟ್ರೈಪ್‌ ಸೂಟು, ಖುದ್ದಾಗಿ ಅಳತೆ ಕೊಟ್ಟು ಹೊಲಿಸಿಕೊಂಡು ತೊಟ್ಟೆ. ಅಲ್ಲಿ ನೋಡಿದರೆ ಎಲ್ಲರ ಗೌರವಕ್ಕೆ ಪಾತ್ರನಾದ ರಿಚರ್ಡ್‌ ಹಾಗರ್ಟ್‌- ಕಾರ್ಮಿಕ ವರ್ಗದಿಂದ ಹುಟ್ಟಿಬಂದ ಮಹಾ ಪ್ರತಿಭಾಶಾಲಿ- ಕಾರ್ಮಿಕರು ಹಾಕುವ ಟೋಪಿ ಹಾಕಿಕೊಂಡು, ಮಾಸಿದ ಸೂಟು ತೊಟ್ಟು, ಟೈ ಇಲ್ಲದೆ ಬರುತ್ತಿದ್ದ. ಕ್ಲಾಸು ತೆಗೆದುಕೊಳ್ಳುವಾಗ ಮಾತ್ರ ಕಪ್ಪು ಗೌನನ್ನು ಹಾಕಿಕೊಂಡಿರುತ್ತಿದ್ದ. ಪಬ್ಬಿನಲ್ಲಿ ಕೂತು ವಿದ್ಯಾರ್ಥಿಗಳ ಜೊತೆ ಹರಟೆ ಹೊಡೆಯುತ್ತಿದ್ದ. ಇವನ ಖಿಛಿ ಟ್ಛ ಔಜಿಠಿಛ್ಟಿ್ಚ ಎನ್ನುವ ಪುಸ್ತಕ ಆಗ ಎಲ್ಲ ೀಮಂತರ- ರೇಮಂಡ್‌ ವಿಲಿಯಮ್ಸ್‌ ನಂಥವರ ಮೆಚ್ಚುಗೆ ಗಳಿಸಿತ್ತು.
ಇವರಿಗೆ ಹತ್ತಿರವಾಗುವುದು ನನ್ನ ಆಸೆಯಾದರೂ ಮೊದಲ ಆರು ತಿಂಗಳು ಇಂಗ್ಲಿಷ್‌ ಕಾಂಪೊಸಿಶನ್‌ ಕ್ಲಾಸಿಗೆ ನನ್ನನ್ನು ಕಳಿಸಿದರು. ಅದನ್ನೆಲ್ಲ ಎಂಎ ಮಾಡಿ ಹೋಗಿದ್ದ ನಾನು ಸಹಿಸಿಕೊಂಡೆ. ಇಂಗ್ಲಿಷ್‌ ಪರಭಾಷೆಯಲ್ಲವೆ? ನಾನು ಕಲಿಯಬೇಕಾದ್ದು ಇರಬಹುದು ಎಂದುಕೊಂಡೆ. ಪಾಸಾದೆ. ಆಮೇಲೆ ಏನು ರೀಸರ್ಚ್‌ ಮಾಡಬಹುದೆಂದು ನನ್ನ ಟ್ಯೂಟರ್‌ನನ್ನು ಕೇಳಬೇಕಾಗಿತ್ತು. ಲಾರೆನ್ಸ್‌ ಮೇಲೆ ಹಲವರು ಬರೆದಾಗಿಬಿಟ್ಟಿದ್ದರಿಂದ ಹೆಚ್ಚೇನೂ ನನಗೆ ಹೇಳುವುದು ಉಳಿದಿರಲಿಲ್ಲ. ಮುವ್ವತ್ತರ ದಶಕದ ಕೊನೆಯಲ್ಲಿ ಹಿಟ್ಲರನ ಯಮಪಾಶದಲ್ಲಿ ಇಡೀ ಯೂರೋಪೇ ಸಿಕ್ಕಿಬಿದ್ದಾಗ ಹುಟ್ಟಿದ ಆರ್ವಲ್‌, ಆಡೆನ್‌, ಇಶರ್ವುಡ್‌, ಇನ್ನೂ ಮುಖ್ಯವಾಗಿ ವಿಮರ್ಶಕರ ಕಣ್ಣಿಗೆ ಬೀಳದ ಎಡ್ವರ್ಡ್‌ ಅಪ್‌ವರ್ಡ್‌ ಎಂಬಾತನ ಬಗ್ಗೆ ನಾನು ರೀಸರ್ಚ್‌ ಮಾಡಬೇಕೆಂದು ಕೊಂಡಿದ್ದ. ಇಂಗ್ಲೆಂಡಿನಲ್ಲಿ ಅದಾಗಲೇ ಕಾದಂಬರಿಕಾರ ನೆಂದೂ, ಹೊಸ ಚುರುಕಿನ ವಿಮರ್ಶಕನೆಂದೂ ಖ್ಯಾತನಾ ಗಿದ್ದ ಮಾಲ್ಕಂ ಬ್ರಾಡ್‌ ಬರಿ ಎಂಬಾತನ, ನನ್ನಷ್ಟೇ ವಯಸ್ಸಿನ ಆಧ್ಯಾಪಕನ ಬೆಂಬಲವೂ ನನಗೆ ಇತ್ತು. ಆದರೆ ನನ್ನ ಟ್ಯೂಟರ್‌ ಇದನ್ನು ಒಪ್ಪಬೇಕಾಗಿತ್ತು. ಈತ ವಯಸ್ಸಾದವ; ಹಳೆಯ ಕಾಲದವ. ಒಳ್ಳೆಯ ಮನುಷ್ಯ. ಅವನು ಆಗತಾನೇ ಭಾರತ ದಲ್ಲಿ ಪ್ರವಾಸ ಮಾಡಿ ಬಂದಿದ್ದ. ನನಗೆ ಅವನ ಹಿರಿತನದ ಉಪದೇಶ ಹೀಗಿತ್ತು: `ರೀಸರ್ಚ್‌ ಬೇಡ. ಫೋನೆಟಿಕ್ಸ್‌ ಮಾಡು. ಇಂಗ್ಲಿಷಿನ ಫೋನೆಟಿಕ್ಸ್‌ ಸಿಸ್ಟಂ ನಿನಗೆ ಕರಗತವಾದರೆ ನಿನ್ನಂತಹ ಬುದ್ಧಿವಂತ ಯುವಕ ಯುಎನ್‌ಓನಲ್ಲಿ ಕೆಲಸ ಮಾಡಬಹುದು. ಕೇಂಬ್ರಿಜ್‌ನಲ್ಲಿ ಕಲಿತ ರಾಜನ್‌ ಎಷ್ಟು ಎತ್ತರಕ್ಕೆ ಏರಿದ್ದಾನೆ ನೋಡು. ಯಾಕೆ ಗೊತ್ತೆ? ಕತ್ತಲಲ್ಲಿ ಅವನ ಮುಖ ನೋಡದೆ ಅವನ ಮಾತು ಕೇಳಿಸಿಕೊಂಡರೆ ಅವ ನೊಬ್ಬ ನಮ್ಮಂತೆಯೇ ಇಂಗ್ಲಿಷ್‌ಮನ್‌ ಎಂದು ತಿಳಿಯು ವಂತಾಗುತ್ತದೆ. ಇಂಡಿಯಾದಲ್ಲಿ ನಾನು ಒಬ್ಬ ದೊಡ್ಡ ಪ್ರೊಫೆ ಸರ್‌ರನ್ನು ಭೇಟಿ ಮಾಡಿದೆ. ಅವರ ಹೆಸರು ಇಯಂಗಾರ್‌ ಅಂತೆ. ಅವನು ಏನು ಹೇಳುತ್ತಾನೆ ತಿಳಿಯುವುದೇ ನನಗೆ ಕಷ್ಟವಾಯಿತು. ಇರಲಿ, ಯಾರ ಮೇಲೆ ರೀಸರ್ಚ್‌ ಮಾಡಬೇಕೆಂದಿದ್ದೀಯ?'
ನನ್ನ ಕಸಿವಿಸಿ ಅದುಮಿಟ್ಟು ಹೇಳಿದೆ: `ಎಡ್ವರ್ಡ್‌ ಅಪ್‌ವರ್ಡ್‌.' ಮತ್ತೆ ಟ್ಯೂಟರ್‌ ಕೇಳಿದ: `ಯಾರು?' ಮತ್ತೆ ನಾನು ಉಗುಳು ನುಂಗಿಕೊಳ್ಳುತ್ತ ಶುದ್ಧ ಗಂಟಲಿನಲ್ಲಿ ಹೇಳಿದೆ: `ಎಡ್ವರ್ಡ್‌ ಅಪ್‌ವರ್ಡ್‌.' ತನ್ನ ಬಿಳಿಕೂದಲಿನ ಗೋಟಿ ಯನ್ನು ಸವರುತ್ತ ಕರುಣೆ ತುಂಬಿದ ದನಿಯಲ್ಲಿ ಟ್ಯೂಟರ್‌ ಹೇಳಿದ: `ನಾನು ಯಾಕೆ ಸಾಹಿತ್ಯದ ರೀಸರ್ಚ್‌ ಬದಲು ಲಿಂಗ್ವಿಸ್ಟಿಕ್ಸ್‌ ಮತ್ತು ಫೋನೆಟಿಕ್ಸ್‌ ಮಾಡೆಂದು ನಿನ್ನಂತಹ ಬುದ್ಧಿವಂತನಿಗೆ ಹೇಳಿದೆ ಗೊತ್ತೆ? ನಿನಗೆ `ಎ' ಗೂ `ಯೆ'ಗೂ ನಡುವಿನ ವ್ಯತ್ಯಾಸ ಗೊತ್ತಾಗುತ್ತ ಇಲ್ಲ. ಹೇಳು `ಎಡ್‌ ವರ್ಡ್‌, ಎಡ್‌ ಎಡ್‌... ಯೆಡ್‌ ಯೆಡ್‌ ಅಲ್ಲ.'
ನನಗೆ ತಡೆಯದಾಯಿತು: `ಸರ್‌, ನಿಮಗೆ ಅಯ್ಯಂಗಾರ್‌ ಎನ್ನಲು ಬರುವುದಿಲ್ಲ; ಇಯೆಂಗಾರ್‌ ಎನ್ನುತ್ತೀರಿ. ನಾನು ಯಾಕೆ ಯೆಡ್ವರ್ಡ್‌ ಅನ್ನಬಾರದು? ನಿಮ್ಮ ಹಾಗೆ ನಾನು ಮೈಸೂರಿನಲ್ಲಿ ಪಾಠ ಮಾಡುವಾಗ ಮಾತಾಡಿದರೆ ವಿದ್ಯಾರ್ಥಿಗಳು ನನ್ನನ್ನು ಇಂಗ್ಲಿಷ್‌ ಸೋಗಿನ ಮಂಗ ಎಂದುಕೊಳ್ಳುತ್ತಾರೆ.'

ನಾನು ಬೈ ಹೇಳಿ ಸೀದಾ ರಿಚರ್ಡ್‌ ಹಾಗರ್ಟ್‌ ಹತ್ತಿರ ಹೋದೆ. ಅವನು ಅಲ್ಲಿ ಸೀನಿಯರ್‌ ಪ್ರಾಧ್ಯಾಪಕ. ಆದದ್ದನ್ನು ವಿವರಿಸಿ `ನಾನು ಫೋನೆಟಿಕ್ಸ್‌ ಮಾಡುವುದಿಲ್ಲ. ನನ್ನ ಕಾಮನ್‌ವೆಲ್ತ್‌ ಸ್ಕಾಲರ್‌ಶಿಪ್‌ ಬಿಟ್ಟುಕೊಡುತ್ತೇನೆ. ಮೈಸೂರಿಗೆ ಹಿಂದಕ್ಕೆ ಹೋಗುತ್ತೇನೆ' ಎಂದೆ. ಹಾಗರ್ಟ್‌ ನಗುತ್ತ ಹೇಳಿದ: ನಿನ್ನ ಟ್ಯೂಟರ್‌ ಒಳ್ಳೆಯ ಮನುಷ್ಯ. ಅವನಿಗೆ ಹೇಳುತ್ತೇನೆ. ಈ ವರ್ಷದ ಕೊನೆಯಲ್ಲಿ ನಿನಗೊಂದು ಎಂಎ ಪರೀಕ್ಷೆ ಮಾಡುತ್ತೇವೆ. ನಿನ್ನ ಮೆಚ್ಚಿನ ಶೇಕ್ಸ್‌ಪಿಯರ್‌ ಬಗ್ಗೆ ನಾಲ್ಕು ಪೇಪರ್‌ಗಳನ್ನು ತೆಗೆದುಕೊಂಡು ಪಾಸು ಮಾಡು. ಆಮೇಲಿಂದ ನಿನಗೆ ಪ್ರಿಯವಾದ ರೀಸರ್ಚ್‌ ಮಾಡು. ನಾನು ಕೂಡ ಮರೆತಾಗ ಸಹಜವಾಗಿ ಮಾತಾಡೋದು ಕಾರ್ಮಿಕರ ಇಂಗ್ಲಿಷ್‌. ನಿನ್ನ ಟ್ಯೂಟರ್‌ ನನಗೂ ಹೀಗೇ ಹೇಳಬಹುದಿತ್ತು' ಎಂದು ನಕ್ಕರು. ಎಂಎಗೆ ಈ ಟ್ಯೂಟರನೇ ಪರೀಕ್ಷಕನಾಗಿದ್ದ. ನಾನು ಬರೆದದ್ದನ್ನು ಓದಿ ತುಂಬ ಇಷ್ಟಪಟ್ಟು, ತನ್ನ ದುಗುಡ ದುಮ್ಮಾನದ ಮಾತಿನಿಂದ ನಾನೇ ನಾಚುವಷ್ಟು ಒಳ್ಳೆಯ ಮಾತಾಡಿ, ರೀಸರ್ಚ್‌ಗೆ ಕಳಿಸಿಕೊಟ್ಟ.
ಅಪ್‌ವರ್ಡ್‌ಗೂ ನನಗೂ ರೀಸರ್ಚಿನಾಚೆಯೂ ಬಳೆದ ಸಂಬಂಧ ಬಹು ಸ್ವಾರಸ್ಯದ, ನನ್ನನ್ನು ಗಾಢವಾಗಿ ಮುಟ್ಟಿ ಬೆಳೆಸಿದ ಇನ್ನೊಂದು ವೃತ್ತಾಂತ. ಪ್ರತ್ಯೇಕವಾಗಿ ಬರೆಯಬೇಕಾದ್ದು- ನನ್ನ ಕಮ್ಯುನಿಸ್ಟ್‌ ಗೆಳೆಯರಿಗಾಗಿ.

***

ಹೆಸರಿನ ಬದಲಾವಣೆ ಮಾತ್ರವಲ್ಲ: ಇನ್ನೂ ಕೆಲವು ವಿಷಯಗಳನ್ನು ಸಭೆಯಲ್ಲಿ ಧರಂಸಿಂಗ್‌ರಿಗೆ ನಾನು ನಿವೇದಿ ಸಿದ್ದೆ. ಕರ್ನಾಟಕದ ಎಲ್ಲರೂ ಅಕ್ಷರಸ್ಥರಾಗಬೇಕು; ಈ ವರ್ಷವೇ ಕನ್ನಡ ಮಾಧ್ಯಮದಲ್ಲಿ ಶಬ್ದ ಸಂಕೋಚ ತೊರೆದು ಇಂಗ್ಲಿಷನ್ನೂ ಬಳಸುವ ಒಂದು ಮೆಡಿಕಲ್‌ ಕಾಲೇಜು, ಒಂದು ಎಂಜಿನಿಯರಿಂಗ್‌ ಕಾಲೇಜು ಪ್ರಾರಂಭಿಸಬೇಕು; ಈ ಕಾಲೇಜುಗಳಿಗೆ ಕನ್ನಡ ಓದಲು-ಬರೆಯಲು ಕಲಿತು ಬರುವ ಯಾರಿಗಾದರೂ ಪ್ರವೇಶವಿರಬೇಕು; ಎಲ್ಲ ಮಕ್ಕಳಿಗೂ ಸಾಮಾನ್ಯ ಶಾಲೆಗಳಲ್ಲಿ ಉಚಿತ ಸಮಾನ ಶಿಕ್ಷಣ ದೊರೆಯ ಬೇಕು. ಎಲ್ಲರಿಗೂ ಇಂಗ್ಲಿಷ್‌ ಮಾತಾಡಲು ಸಾಧ್ಯವಾಗು ವಂತೆ ಮಾಡಿ ಇಂಗ್ಲಿಷನ್ನು ನಮಗೆ ಬೇಕಾದಂತೆ ಪಳಗಿಸಿ ಕೊಂಡು ಅದರ ಭ್ರಮೆ ಕಳೆಯುವಂತೆ ಮಾಡಬೇಕು...
ಧರಂಸಿಂಗ್‌ ಒಪ್ಪಿಕೊಂಡಿದ್ದರು. ಈ ಸುವರ್ಣ ಕರ್ನಾಟಕದ ವರ್ಷದಲ್ಲಿ ಈಗಿನ ಮುಖ್ಯಮಂತ್ರಿಗಳೂ ಮೇಲಿನ ಎಲ್ಲವನ್ನೂ ಒಪ್ಪಿಕೊಂಡಾರೆಂಬ ಭರವಸೆ ಇಟ್ಟು ಕೊಳ್ಳೋಣವೆ? ಜಾಗತೀಕರಣದ ಅಧ್ವರ್ಯುಗಳು ಒಂದು ಹೆಸರಿನ ಬದಲಾವಣೆಯಿಂದಲೇ ಎಷ್ಟು ಬೆಚ್ಚುತ್ತಾರೆ- ಅಲ್ಲವೆ? ರೈತರ ಆತ್ಮಹತ್ಯೆಗೂ, ಸುನಾಮಿಗೂ ಸಂಬಂಧವಿರುವ ಸೆನ್ಸೆಕ್ಸ್‌, ಬೆಂಗಳೂರು ಬೆಂಗಳೂರೇ ಆಗಿಬಿಟ್ಟರೆ ಇಳಿಯಬಹುದೆನ್ನುವ ಭಯ ನಮ್ಮ ಐಟಿಗಳಿಗೆ ಇರಬಹುದೆ?
ಹೆಸರಿನ ಬದಲಾವಣೆ ಒಂದು ಸಂಪೂರ್ಣ ಕನ್ನಡೀ ಕರಣದ, ಅಂದರೆ ನಾವು ಕನ್ನಡಿಗರಾಗಿದ್ದೇ ಜಗತ್ತಿಗೆ ಸಲ್ಲುವ ರಾಗುವ ದಿಕ್ಕಿನತ್ತ ಇಟ್ಟ ಸಾಂಕೇತಿಕ ಕ್ರಿಯೆಯಾಗಲಿ, ಕೇವಲ ಪ್ರಚಾರ ಪಡೆದು ಮರೆತ ಸಂಕೇತವಾಗಿ ಉಳಿಯದಿರಲಿ ಎಂದು ಆಶಿಸುತ್ತೇನೆ,
ವರ್ಡ್‌ಸ್ವರ್ತ್‌ ಕವಿಯಲ್ಲಿ ಓದಿದ ಡಾಫಡಿಲ್ಸ್‌ ಎಂಬ ಹೂವು ಗಾಳಿಗೆ ಓಲಾಡುವುದನ್ನು ಕಣ್ಣಾರೆ ನೋಡಲೆಂದೂ ಇಂಗ್ಲೆಂಡಿಗೆ ಹೋಗಿದ್ದ ನನಗೊಂದು ಆಸೆಯಿದೆ. ಬೆಂಗಳೂರಿಗೆ ಬರುವ ಎಲ್ಲ ಹೊರಗಿನವರೂ ಮೈಸೂರು ಮಲ್ಲಿಗೆಗೂ, ಉಡುಪಿಯ ವಾದಿರಾಜ ಗುಳ್ಳಕ್ಕೂ, ನಂಜನ ಗೂಡಿನ ರಸಬಾಳೆಗೂ, ಅಲ್ಲಮ ಬಸವರ ವಚನಗಳಿಗೂ ಆಸೆ ಪಡುವವರಾಗಬೇಕು. ಜಾಯ್ಸ್‌ನಲ್ಲಿ ಅವನ ಹೀರೋ ಡೆಡಲಾಸ್‌ನ ಅಲೆದಾಟವನ್ನು ಮೆಚ್ಚಿದವರು ಕುವೆಂಪುವಿನ ನಾಯಿಗುತ್ತಿ ಅಲೆದು ಕಾಣುವ ದಟ್ಟ ದಲಿತ ಪ್ರಪಂಚವನ್ನೂ ಕಾಣುವಂತವರಾಗಬೇಕು.

Post new comment

The content of this field is kept private and will not be shown publicly.
CAPTCHA
This question is for testing whether you are a human visitor and to prevent automated spam submissions.
Image CAPTCHA
Copy the characters (respecting upper/lower case) from the image.