ಜನ ಭಾಷೆ ಮತ್ತು ಜ್ಞಾನದ ಭಾಷೆ: ಕೆಲ ಚಿಂತನೆಗಳು

1. ಎಲ್ಲ ಭಾಷೆಗಳೂ ಉಳಿಯುವುದು ಆ ಭಾಷೆಯನ್ನು ಮಾತ್ರ ಬಲ್ಲ ಜನರು ಇರುವ ತನಕ. ಆದರೆ ಇಲ್ಲೊಂದು ವಿರೋಧಾಭಾಸವೆಂದು ಕಾಣುವ ಸಂಗತಿಯಿದೆ. ಭಾಷೆಗಳು ಬೆಳೆಯುವುದು ಆ ಭಾಷೆಗಳನ್ನು ಬಲ್ಲ ಜನರಿಗೆ ಇನ್ನೊಂದು ಸಾಹಿತ್ಯ ಸಮೃದ್ಧವಾದ ಭಾಷೆಯಾದರೂ ಗೊತ್ತಿದ್ದಾಗ. ಹಿಂದೆ ಸಂಸ್ಕೃತದ ಜೊತೆ ಕನ್ನಡ ಅದರ ಅತ್ಯುತ್ತಮ ಮನಸ್ಸುಗಳಲ್ಲಿ ಕೆಲಸ ಮಾಡಿತು. ಈ ಕಾಲದಲ್ಲಿ ಇಂಗ್ಲಿಷ್‌ ಜೊತೆ ಕೆಲಸ ಮಾಡಿತು.

2. ಈ ಎರಡು ಭಾಷೆಗಳ ನಡುವಿನ ಕೊಡು- ಕೊಳ್ಳುವ ಸಂಬಂಧ ಒಂದು ಇನ್ನೊಂದಕ್ಕೆ ಮೇಲಿನದು ಎಂಬ ಭಾವನೆ ಇದ್ದಾಗ ಮತ್ತು ಈ ಭಾವನೆ ರಾಜಕೀಯ, ಆರ್ಥಿಕ ಕಾರಣಗಳನ್ನೂ ಪಡೆದಿ ದ್ದಾಗ ಈ ಒಡನಾಟ `ಒಂದು ಭಾಷೆ ಕೊಡುವುದು ಮಾತ್ರ, ಇನ್ನೊಂದು ಭಾಷೆ ಪಡೆಯುವುದು ಮಾತ್ರ' ಎಂಬ ಯಜಮಾನಿಕೆಯದಾಗಿರುತ್ತದೆ. ಈ ಯಜಮಾನಿಕೆಯನ್ನು ಗೆದ್ದವರು ನಮ್ಮ ಹಲವು ಹಿರಿಯ ಲೇಖಕರು- ಮುಖ್ಯವಾಗಿ ಸಾಹಿತ್ಯದಲ್ಲಿ. ಇದಕ್ಕೆ ಸಾವಿರ ವರ್ಷಗಳ ಇತಿಹಾಸವಿದೆ. ತನ್ನ ಪ್ರದೇಶದ್ದು ಮಾತ್ರವಾದ ಚಲಿಸದ ಭಾಷೆಯಾದ ಕನ್ನಡ ತನ್ನೊಳಗೆ ಇಡೀ ಪ್ರಪಂಚವನ್ನು ಕಂಡು ಕಾಣಿಸಬಲ್ಲದು ಎನ್ನುವ ವಿಶ್ವಾಸ ಕವಿರಾಜಮಾರ್ಗದ ಕಾಲದಿಂದ ಈವರೆಗೆ ನಮ್ಮ ಅತ್ಯುತ್ತಮ ಮನಸ್ಸು ಗಳಲ್ಲಿ ಕೆಲಸ ಮಾಡಿದೆ. (ಇಂಗ್ಲಿಷಿನಲ್ಲೂ ಅದು ಚಲಿಸದ ಭಾಷೆಯಾಗಿದ್ದಾಗ ಶೇಕ್ಸ್‌ಪಿಯರ್‌ ಬಂದನೆಂಬುದನ್ನು ಮರೆಯಬಾರದು)

3. ಚಲಿಸದ ಸ್ಥಳೀಯ ಭಾಷೆಗೂ ಚಲಿಸುವ ಇನ್ನೊಂದು ಭಾಷೆಗೂ ನಡುವೆ ಏರುಪೇರಿಲ್ಲದ ಸಮಸಮವೆನ್ನಿಸುವ ಸಂಬಂಧವಿರಬಹುದೆಂಬು ದನ್ನು ಮೊನ್ನೆ ತಾನೇ ಯುಗೊಸ್ಲಾವಿಯಾದ, ಫ್ರಾನ್ಸ್‌ ನಲ್ಲಿ ಕಲಿಸುವ ರಾದಾ ಎಂಬ ಒಬ್ಬ ಮಹಿಳೆಯನ್ನು ಕೇರಳದಲ್ಲಿ ಭೇಟಿಯಾದಾಗ ತಿಳಿದೆ. ತಮ್ಮ ಜನರ ಜೊತೆ ಮಾತಾಡುವಾಗ ಸ್ವೀಡಿಷ್‌ ಜನರು ಸ್ವೀಡಿಷ್‌ ಭಾಷೆಯನ್ನು ಮಾತ್ರ ಬಳಸುತ್ತಾರೆ. ಅದರಲ್ಲೆ ಬರೆಯುತ್ತಾರೆ; ಅದರಲ್ಲೇ ಕಲಿಯುತ್ತಾರೆ. ಜೊತೆಗೇ ಎಲ್ಲರಿಗೂ ಇಂಗ್ಲಿಷ್‌ ಕೂಡ ಇನ್ನೊಂದು ಭಾಷೆಯಾಗಿ ಗೊತ್ತಿರುತ್ತದೆ; ಹೊರಗಿನವರ ಜೊತೆ ಇಂಗ್ಲಿಷನ್ನು ಸಂಪರ್ಕ ಭಾಷೆಯಾಗಿ ಬಳಸುತ್ತಾರೆ. ಅದರದರ ಸ್ಥಾನ, ಮನ್ನಣೆಗಳಲ್ಲಿ ಗೊಂದಲವಿಲ್ಲ; ಎರಡೂ ಒಂದೇ ಬಲದ ಭಾಷೆಗಳು. ಫ್ರೆಂಚನ್ನಾ ಗಲೀ, ಜರ್ಮನ್‌ನನ್ನಾಗಲೀ ಅವರು ಕಲಿಯ ಬಹುದು. ಆದರೆ ಹೀಗೆ ಇಂಗ್ಲಿಷನ್ನು ಬಳಸುವಂತೆ ಉಳಿದ ಐರೋಪ್ಯ ಭಾಷೆಗಳನ್ನು ಅವರು ಬಳಸುವುದಿಲ್ಲ. ಹಲವು ಬಗೆಗಳ ಇಂಗ್ಲಿಷುಗಳು ಇರುವಂತೆ ಹಲವು ಫ್ರೆಂಚುಗಳೂ ಜರ್ಮನ್ನುಗಳೂ ಇರಬಹುದು; ಆದರೆ ಅವು ಇಂಗ್ಲಿಷಿನಂತೆ ಸರ್ವ ಸ್ವೀಕಾರದ ಜಾಗತಿಕ ಭಾಷೆಗಳಲ್ಲವೆಂಬುದೇ ಅದಕ್ಕೆ ಕಾರಣವೆಂದು ಪ್ರೊಫೆಸರ್‌ ರಾದಾ ಅವರು ವಾದಿಸಿದರು.

ಇದನ್ನು ಕೇಳಿದಾಗ ನನ್ನ ನೆನಪಿಗೆ ಬಂದದ್ದು ನಾವು ಕೊಂಕಣಿ, ತುಳುಗಳ ಜೊತೆ ಕನ್ನಡವನ್ನು ಬಳಸುವ ಬಗೆ. ಇಲ್ಲಿ ಹೆಜಿಮನಿ, ಯಾಜಮಾನ್ಯದ ಮೇಲುಗಾರಿಕೆಯಿಲ್ಲ. ಎರಡೂ ಸ್ಥಳೀಯವೇ. ನಾವು ಬಳಸುವ ಇಂಗ್ಲಿಷಾದರೋ ಪರಸ್ಥಳೀಯರಿಗೆ ಕಾಲ್‌ಸೆಂಟರ್‌ಗಳಲ್ಲಿ ಸಲ್ಲಲೆಂದು, ತನ್ನ ಹಿಂದಿನ ಸ್ಥಳೀಯ ಗುಣಗಳನ್ನು ಕಳೆದುಕೊಂಡು, ಕನ್ನಡವನ್ನು ಕೇವಲ ಅಡುಗೆಮನೆ ಭಾಷೆಯಾಗುವ ಸ್ಥಿತಿಗೆ ತಳ್ಳುತ್ತಿದೆ ಅಥವಾ ಕನ್ನಡ ಆರಾಮಿನ ಬೆರಕೆ ಭಾಷೆಯಾಗಿ ತನ್ನ ಗುಣಗಳನ್ನೂ ಶಬ್ದಗಳನ್ನೂ ಕಳೆದುಕೊಳ್ಳುತ್ತಿದೆ. ಇಂಗ್ಲಿಷ್‌ ಮಾಧ್ಯಮ ದಲ್ಲೇ ಓದಿದ ಪುಣ್ಯವಂತರು ಕನ್ನಡವನ್ನು ಕೇವಲ ಅಡುಗೆ ಮನೆ ಭಾಷೆಯಾಗಿ ಬಳಸಬಲ್ಲವರಾಗಿರುತ್ತಾರೆ; ಇವರಿಗೆ ಸ್ವಂತ ಮನೆಯ ಪರಿಸರದಲ್ಲೇ ಇಂಗ್ಲಿಷ್‌ ಇರುತ್ತದೆ. ಇಂತಹ ಪರಿಸರವಿಲ್ಲದ ದುರದೃಷ್ಟವಂತರು ಇಂಗ್ಲಿಷ್‌ ಮಾಧ್ಯಮದಲ್ಲಿ ಕಲಿತಾಗ ಏನನ್ನೂ ಆತ್ಮೀಯವಾಗಿ ಕಲಿಯದೆ, ಪಡೆಯದೆ ಭಾಷಾದರಿದ್ರರಾಗಿ ಇರುತ್ತಾರೆ. ಸ್ವೀಡಿಷ್‌ ಮತ್ತು ಇಂಗ್ಲಿಷ್‌ ಸಮಸಮವಾಗಿ ಜೊತೆ ಯಾಗಿರುವಂತೆ ಕನ್ನಡ-ಇಂಗ್ಲಿಷ್‌ ಇರುವುದು ಸಾಧ್ಯವೆ?

ಇದೊಂದು ಕೈಗೂಡಬೇಕಾದ ಕನಸು- ಅಧಿಕಾರದ ಸ್ಥಾನದಿಂದ ಇಂಗ್ಲಿಷನ್ನು ಅಟ್ಟುವುದು ಸಾಧ್ಯವೇ ಆಗದೇ ಹೋದಲ್ಲಿ ಈ ಸಮಸಮದ ಸಂಬಂಧಕ್ಕೆ ಪ್ರಜಾತಂತ್ರದ ಭಾರತ ಪ್ರಯತ್ನಿಸಬೇಕಾಗುತ್ತದೆ. ಇದು ಸಾಧ್ಯವಾಗಲು ಕನ್ನಡಿಗರೆಲ್ಲರೂ ಅಕ್ಷರಸ್ಥರಾಗಬೇಕು; ಕನ್ನಡದಲ್ಲೇ ಜ್ಞಾನವನ್ನು ಸೃಷ್ಟಿಸಬಲ್ಲವರು ಸಾಹಿತ್ಯದಲ್ಲಿ ಮಾತ್ರವಲ್ಲದೆ ಎಲ್ಲ ರಂಗದಲ್ಲೂ ಹುಟ್ಟಬೇಕು.

4. ಕನ್ನಡ ಶಿಕ್ಷಣ ಮಾಧ್ಯಮವಾಗಿರಬೇಕೆಂದೂ, ಇಂಗ್ಲಿಷನ್ನು ಕಲಿಸುವುದಾದರೆ ಅದನ್ನು ತಡವಾಗಿ ಅಂದರೆ ಕನ್ನಡ ಕಲಿತ ನಂತರ ಕಲಿಸಬೇಕೆಂದೂ ಹಲವರು ವಾದಿ ಸುತ್ತಾರೆ. ಲಭ್ಯವಿರುವ ಸಮಯದ ದೃಷ್ಟಿಯಿಂದ ಮತ್ತು  ಇದನ್ನು ಎಲ್ಲ ಮಕ್ಕಳಿಗೂ ಅನ್ವಯಿಸಿದಾಗ ಮಾತ್ರ ಇದು ಸರಿಯಾದ ವಾದ. ಮೊದಲಿನಿಂದ ಕೊನೆಯವರೆಗೆ, ಸ್ನಾತಕೋತ್ತರ ಶಿಕ್ಷಣದಲ್ಲೂ ಅನ್ವಯವಾಗುವಂತಿದ್ದರೆ ಅತ್ಯಂತ ಸಮರ್ಪಕವಾದ ಕ್ರಮ. ಆದರೆ ತಡವಾಗಿ ಇಂಗ್ಲಿಷ್‌  ಕಲಿತವರೂ, ಮುಂಚೆಯೇ ಕಲಿತವರೂ ಒಟ್ಟಾಗಿ ಇಂಗ್ಲಿಷ್‌ ಮಾಧ್ಯಮದಲ್ಲಿ ಕಲಿಯಲೇಬೇಕಾದ ಸ್ಥಿತಿಯಲ್ಲಿ ಇದು ಅಸಮಾನತೆಯನ್ನು ಸೃಷ್ಟಿಸುತ್ತಿರುವುದ ರಿಂದ ಸಮಸ್ಯೆಯಾಗಿ ಪರಿಣಮಿಸಿದೆ.

5. ಹಿಂದೀ ಲೇಖಕರಿಗೆ ನಾನೊಮ್ಮೆ ಹೇಳಿದ್ದೆ. `ನೀವು ಹಿಂದಿಯಲ್ಲಿ ಜ್ಞಾನವನ್ನು ಸೃಷ್ಟಿಸುತ್ತಿಲ್ಲ. ಇಂಗ್ಲಿಷಿನಿಂದ ಆಮದು ಮಾಡಿಕೊಳ್ಳುತ್ತಿದ್ದೀರಿ. ನಾವು ಯಾಕೆ ಜ್ಞಾನದ ಭಾಷೆಯಾಗಿ ಹಿಂದಿಯನ್ನು ಕಲಿಯಬೇಕು ಹೇಳಿ? ನಾವೂ ಇಂಗ್ಲಿಷಿನಿಂದ ಆಮದು ಮಾಡಿಕೊಳ್ಳುತ್ತೀವಿ. ಬದಲಾಗಿ ಹಿಂದಿಯಲ್ಲಿ ಹೊಸ ಜ್ಞಾನದ ಸೃಷ್ಟಿಯಾಗುತ್ತ ಇದ್ದಿದ್ದರೆ ನಾವೂ ಹಿಂದಿಯನ್ನು ಜ್ಞಾನದ ಇನ್ನೊಂದು ಭಾಷೆಯಾಗಿ ಕಲಿಯಬೇಕಾಗಿ ಬರುತ್ತ ಇತ್ತು.' ಇಡೀ ದೇಶ ತಮ್ಮ ಸರ್ವ ವ್ಯವಹಾರದಲ್ಲೂ- ಊಟ, ತಿಂಡಿ, ವೇಷ, ಭೂಷಣ, ವಿಜ್ಞಾನ, ಮಾನವಿಕ ಶಾಸ್ತ್ರಗಳು- ಎಲ್ಲದರಲ್ಲೂ ಅನುಸರಿಸುತ್ತ ಇರುವುದು ಅಮೆರಿಕಾವನ್ನು.

6. ಇದನ್ನು ಕೊಂಚ ಬೇಸರದಲ್ಲಿ ಹೇಳುತ್ತಿದ್ದೇನೆ. ನಮ್ಮ ಸರ್ಕಾರೀ ಶಾಲೆಗಳಲ್ಲಿ ಎಲ್ಲ ಮಕ್ಕಳೂ ಹತ್ತನೇ ಇಯತ್ತೆಯ ತನಕವಾದರೂ ಒಟ್ಟಾಗಿ ವಿದ್ಯಾಭ್ಯಾಸ ಪಡೆಯಬೇಕೆಂದೂ, ನಮ್ಮ ದುಬಾರಿ ಖಾಸಗಿ ಶಾಲೆಗಳು ದುಷ್ಟವೆಂದೂ ನಾನು ಹೇಳುತ್ತ ಬಂದಿರುವುದನ್ನು ಕನ್ನಡದ ವಾದಿಗಳೆಲ್ಲರೂ ನಿರ್ಲಕ್ಷಿಸಿದ್ದಾರೆ. ವರ್ಗ-ವರ್ಣಗಳ ಬೇಧವಿಲ್ಲದಂತೆ ಹತ್ತನೆಯ ಇಯತ್ತೆಯ ತನಕವಾದರೂ ಎಲ್ಲ ಮಕ್ಕಳು ಒಡನಾಡುವಂತಿದ್ದರೆ ಅವರ ಅನ್ಯೋನ್ಯತೆ ಯಲ್ಲಿ ನಾವು ಭಾರತೀಯರು ಎನ್ನುವ ಭಾವನೆ ಬಲಗೊಳ್ಳು ತ್ತಿತ್ತು. ಮಕ್ಕಳ ಬೇರೆ ಬೇರೆ ಲೋಕಗಳು, (ಈ ಲೋಕಗಳ `ಬಹುವಚನಗಳು') ಏಕತ್ರವಾಗಿ ಒದಗುವುದೂ, ಪರಸ್ಪರ ಹೆಣೆದುಕೊಳ್ಳುವುದೂ ಶಾಲೆಗಳಲ್ಲಾದರೂ ಸಾಧ್ಯ ವಾಗಬಹುದಿತ್ತು. ಎಷ್ಟು ಕನ್ನಡ, ಎಷ್ಟು ಇಂಗ್ಲಿಷ್‌ ಬೇಕೆಂ ಬುದನ್ನು ಶಾಲೆಯ ಜ್ಞಾನಸೃಷ್ಟಿಯ ನಿತ್ಯಯಜ್ಞದಲ್ಲೇ ಕಂಡುಕೊಳ್ಳಬಹುದಿತ್ತು.

7. ಈ ಸಾಮಾನ್ಯಶಾಲೆಗಳಿಗೆ ಎಲ್ಲ ಮಕ್ಕಳೂ ಹೋಗಿ ಕಲಿಯುವಂತಾಗಲು ಇಂಗ್ಲಿಷನ್ನು ಒಂದನೇ ತರಗತಿ ಯಿಂದ ಕಲಿಸುವುದು ಅಗತ್ಯವಾದರೆ- ಮಾತಾಡಲು ಮಾತ್ರ- ಓದಲು, ಬರೆಯಲು ಅಲ್ಲ- ಕಲಿಸಬೇಕೆಂದು ನಾನು ಹೇಳುತ್ತಿದ್ದೇನೆ. ಬಡ ತಾಯಿ-ತಂದೆಯರೂ ಇದನ್ನು ಬಯಸುವುದರಿಂದ- ಅಷ್ಟೆ. ನಾನು ಕೊಡುವ ಕಾರಣದ (ಸಾಮಾನ್ಯ ಶಾಲೆಗಳಲ್ಲಿ ಸಮಾನ ಶಿಕ್ಷಣ ದೊರೆ ಯಬೇಕೆಂಬ ಕಾರಣದ) ಈ ವಾದವನ್ನು ಯಾರೂ- ಇಂಗ್ಲಿಷ್‌ ಬೇಕೆನ್ನುವವರೂ ಬೇಡವೆನ್ನುವವರೂ- ಮೊದಲಿನಿಂದಲೂ ಗಂಭೀರವಾಗಿ ಪರಿಗಣಿಸಿದಂತೆ ನನಗೆ ತೋರುವುದಿಲ್ಲ.

8. ಇಂಗ್ಲಿಷ್‌ ಮಾಧ್ಯಮದ ಖಾಸಗಿ ಶಾಲೆಗಳನ್ನು ಕಾನೂನುಬದ್ಧವಾಗಿ ನಾವು ಮುಚ್ಚುವಂತಿಲ್ಲ. ಆದರೆ ಒಂದು ಮಾನವಿಕ ವಿಷಯವನ್ನು ಈ ಶಾಲೆಗಳಲ್ಲಿ ಕನ್ನಡದಲ್ಲೇ ಕಲಿಸಬೇಕೆಂಬ ನಿಯಮವಿರಬೇಕು. ಕನ್ನಡವನ್ನು ಒಂದು ಭಾಷೆಯಾಗಿ ಕಡ್ಡಾಯ ಮಾಡಿದರೆ ಸಾಲದು. ಶೇಕಡಾ ಮುವ್ವತ್ತೈದು ಅಂಕಗಳಿಗೆ ಕನ್ನಡ ಪರಿ ಮಿತವಾಗಿ ನಂತರ ಮರೆತುಬಿಡುವ ಭಾಷೆಯಾಗುತ್ತದೆ.

9. ಒಂದು ಸಾವಿರ ವರ್ಷಗಳ ಹಿಂದೆ ಮೇಲು ವರ್ಗದವರ ಸರ್ವತ್ರದ ಭಾಷೆಯಾಗಿದ್ದ ಸಂಸ್ಕೃತ ತನ್ನ ಜಾಗವನ್ನು ಭಾರತೀಯ ಜನಸಾಮಾನ್ಯರ ಭಾಷೆಗೆ ಎಡೆಮಾಡಿಕೊಟ್ಟು ಒಂದು ಕಲಾಕ್ರಾಂತಿಗೂ, ಜ್ಞಾನದ ಕ್ರಾಂತಿಗೂ ಕಾರಣವಾಯಿತು. ತುಳಸೀದಾಸರು, ಕಂಬನ್‌, ಪಂಪ, ಅಲ್ಲಮ, ತುಕಾರಮ್‌- ಹೀಗೆ ಹಲವರು ಹುಟ್ಟಿಕೊಂಡು ವಾಙ್ಮಯದ ಜೀವನವನ್ನು ಸಮೃದ್ಧಗೊಳಿಸಿದರು. ಸುಮಾರು ಐದುನೂರು ವರ್ಷಗಳ ಹಿಂದೆ ಐರೋಪ್ಯ ನಾಗರೀಕತೆಯ ಶ್ರೇಷ್ಠರ ಜ್ಞಾನ ಭಾಷೆ ಯಾಗಿದ್ದ ಲ್ಯಾಟಿನ್‌ ಹಲವು ಐರೋಪ್ಯ ಜನ ಸಮುದಾಯಗಳ ಭಾಷೆಗಳಿಗೆ ಎಡೆಮಾಡಿಕೊಟ್ಟು ಶೇಕ್ಸ್‌ಪಿಯರ್‌, ಡಾಂಟೆಯಂಥವರು ಹುಟ್ಟಿಕೊಂಡರು. ಜ್ಞಾನಿ ನ್ಯೂಟನ್‌ ಬರೆದದ್ದು ಲ್ಯಾಟಿನ್‌ನಲ್ಲಿ; ಕವಿಯಾಗಿ ತಾನು ಅದೃಶ್ಯನಾಗಬಹುದೆಂಬ ಭಯದಲ್ಲಿ ಮಿಲ್ಟನ್‌ ಕೂಡ ಲ್ಯಾಟಿನ್‌ನಲ್ಲಿ ಬರೆದನಂತೆ. ಅದೇ ಡಾರ್ವಿನ್‌ ಜನಭಾಷೆಯಾದ ಇಂಗ್ಲಿಷಿನಲ್ಲಿ ಬರೆದು ಎಲ್ಲ ವಲಯ ದಲ್ಲೂ ಒಂದು ಕ್ರಾಂತಿಯನ್ನೇ ಮಾಡಿದ.

10. ಈಗ ತದ್ವಿರುದ್ಧದ ಕ್ರಿಯೆ ನಡೆದಿದೆ. ಯೂರೋಪಿನಲ್ಲೂ ಇಂಗ್ಲಿಷ್‌ ಯಜಮಾನಿಕೆ ಮಾಡುತ್ತಿದೆ. ವಿಕೇಂದ್ರಿಕೃತವಾದದ್ದು ಕೇಂದ್ರೀಕೃತವಾಗುತ್ತಿದೆ. ಈವರೆಗೆ ಪ್ರಪಂಚ ಕಾಣದ ಯಜಮಾನಿಕೆ ಹುಟ್ಟಿಕೊಂಡಿದೆ. ಇದು ಅಲ್ಪಾಯುವಿರಬಹುದೆಂಬ ಕನಸನ್ನು ಕಾಣುವವರಲ್ಲಿ ನಾನೂ ಒಬ್ಬ.

11. ಕೆಲವು ವರ್ಷಗಳ ಹಿಂದೆ ದೆಹಲಿಯಲ್ಲಿ ಒಬ್ಬ ಆಸ್ಟ್ರೇಲಿಯಾದ ಲೇಖಕನನ್ನು ಭೇಟಿಯಾದೆ. ವ್ಯವ ಹಾರದ ದೃಷ್ಟಿಯಿಂದ ಇವನೊಬ್ಬ ಡಾನ್‌ ಕ್ವಿಕ್ಸಾಟ್‌ ನಂತಹ ಹುಚ್ಚನೇ.  ಆದರೆ ಈ ದಾರ್ಶನಿಕ ಹುಚ್ಚನ ಮಾತು ನನ್ನನ್ನು ಆಳವಾಗಿ ಕಲುಕಿತು. ಬಿಳಿ ಜನರು ಆಸ್ಟ್ರೇಲಿಯಾದ ಮೂಲ ನಿವಾಸಿಗಳಿಂದ ಎಲ್ಲವನ್ನೂ ಕದ್ದರು. ಕ್ರಿಶ್ಚಿಯನ್‌ ಪಾದ್ರಿಗಳು ಅವರ ದೇವ ದೇವತೆ ಗಳೆಲ್ಲ ಸುಳ್ಳೆಂದು ನಾಶಮಾಡಿದರು. ಅವರ ಭಾಷೆಗಳನ್ನು, ಅವರ ಕಥೆಗಳನ್ನು, ಅವರ ಜಾನಪದ ನೃತ್ಯ ಕಾವ್ಯಗಳನ್ನು ಮರೆಯುವಂತೆ ಮಾಡಿ ಅವರನ್ನು  ಕಳಪೆಗೊಳಿಸಿದರು. ಇಂತಹ ಒಂದು ಬುಡಕಟ್ಟಿನಲ್ಲಿ ಹುಟ್ಟಿದ ಈ ಲೇಖಕ ಹೇಳಿದ: `ನನ್ನ ಜೀವನದ ಗುರಿ ಸತ್ತ ನಮ್ಮ ಭಾಷೆಗಳನ್ನು ಮತ್ತೆ ನೆನಪು ಮಾಡಿಕೊಳ್ಳುವುದು; ಸತ್ತ ನಮ್ಮ ದೇವತೆ ಗಳಿಗೆ ಮತ್ತೆ ಜೀವ ತರುವುದು. ಅದಕ್ಕಾಗಿ ನಾನು ಬದುಕುತ್ತೇನೆ.'

ಅಮೆರಿಕಾದಲ್ಲೂ ಮೂಲನಿವಾಸಿಗಳು ಇದ್ದರು. ನಿಸರ್ಗ ಪ್ರೇಮದಲ್ಲಿ, ನಾಗರಿಕ ನಡಾವಳಿಗಳಲ್ಲಿ ಇವರೇನೂ ಐರೋಪ್ಯರಿಗಿಂತ ಕಮ್ಮಿಯಲ್ಲ. ಆದರೆ ಯೂರೋಪಿನ ಕೈಯಲ್ಲಿ ಬಂದೂಕಿತ್ತು. ಬಡವರಿಗಾ ಗಿಯೇ ಹುಟ್ಟಿದ ಕ್ರೈಸ್ತ ಧರ್ಮವನ್ನು ಇವರು ತಮ್ಮ ದುರಾಸೆಯನ್ನು ಸಾಧಿಸಿಕೊಳ್ಳುವ ಉಪಾಯ ಮಾಡಿ ಕೊಂಡಿದ್ದರು. ಈಗ `ರಿಸರ್ವೇಶನ್‌'ಗಳಲ್ಲಿ ಬದುಕಿರುವ ಅಳಿದುಳಿದ ಮೂಲನಿವಾಸಿಗಳ ಸಂತತಿಯವರು ಪೊಟ್ಟಣಗಳಲ್ಲಿ ಸಿದ್ಧಪಡಿಸಿದ್ದನ್ನು ಹೊಟ್ಟೆತುಂಬ ತಿಂದು, ದಿನವಿಡೀ ಕುಡಿದು, ಆಕಳಿಸುವ ಸೋಮಾರಿಗಳು. ಟೂರಿಸ್ಟರ ಕುತೂಹಲ ತಣಿಸುವ ವೇಷಧಾರಿಗಳು. ಹಿಂದೆ ಗುಲಾಮರಾಗಿದ್ದ ಕಪ್ಪು ಜನರ ಕೆಚ್ಚು ಅಮೆರಿಕಾದ ಮೂಲ ಯಜಮಾನರಾಗಿದ್ದ ಇವರಲ್ಲಿ ಇಲ್ಲ.

ಭಾರತವನ್ನು ಅದರ ಜನಮೊತ್ತದಿಂದಾಗಿ, ಅದರ ಅನೇಕಾನೇಕ ಭಾಷೆಗಳಿಂದಾಗಿ, ಅದರ ವೈವಿಧ್ಯದ ಮತಧರ್ಮಗಳಿಂದಾಗಿ ರಿಸರ್ವೇಶನ್ನುಗಳಲ್ಲಿ ಕೂಡಿ ಡಲು ಸಾಧ್ಯವಾಗಲಿಲ್ಲ. ಭಾರತದ ಸಿಟಿಗಳನ್ನು ಸಿಂಗಪುರ್‌ ಮಾಡಲು ಹೊರಟಿರುವ ನಮ್ಮ ಕೆಲವು ವಾಣಿಜ್ಯದವರಿಗೆ, ಅವರನ್ನು ಅನುಸರಿಸುವ ರಾಜಕಾರಣಿಗಳಿಗೆ ಕೃಷಿ ಜೀವನವನ್ನು ಕ್ರಮೇಣ ಕಳಪೆಗೊಳಿಸುವ ಮೂಲಕ ಇಂತಹ ಬಡಜನರ ರಿಸರ್ವೇಶನ್ನುಗಳನ್ನು ಸೃಷ್ಟಿಸುವ ಹುನ್ನಾರವಿರುವಂತೆ ಕಾಣುತ್ತದೆ.

***

ಈಚೆಗೆ ನಡೆದೊಂದು ಘಟನೆ ಹೇಳುತ್ತೇನೆ. ಬೆಂಗಳೂರಿನಲ್ಲಿ ಒಂದು ಬ್ಯಾಂಗಲೂರ್‌ ಕ್ಲಬ್‌ ಇದೆ. ಅಲ್ಲಿಗೆ ಅದರ ಮೆಂಬರೊಬ್ಬರು ನನ್ನನ್ನು ಊಟಕ್ಕೆ ಕರೆದುಕೊಂಡು ಹೋದರು. ನಾನು ಶೂ ಪ್ಯಾಂಟು ಧರಿಸಿದ್ದೆ. ಆದರೆ ಕುರ್ತಾ ಹಾಕಿದ್ದೆ. ಹುಲ್ಲಿನ ಬಣ್ಣದ ತಾಜಾ ಹಸಿರಿನ ಕುರ್ತಾ. ಒಂದು ವಾರದ ಹಿಂದಷ್ಟೇ ಅದನ್ನು ಕಂಡು ಟಾಮ್‌ ಆಲ್ಟರ್‌ ಎಂಬ ಭಾರತೀಯ ನಾಗಿ ಬಿಟ್ಟ ಬ್ರಿಟಿಷ್‌ ನಟ ಪುಣೆಯಲ್ಲಿ ಮೋಹಿತನಾಗಿದ್ದ. ಅದರ ತಾಜಾ ಬಣ್ಣಕ್ಕೆ, ಅದರ ಕೈಮಗ್ಗದ ಹೆಣಿಗೆಗೆ. ನಾನು ಈ ದೇಸೀ ಬಟ್ಟೆಗಳನ್ನು ಹೆಣೆದು ಹೊಲಿಯುವ ಹಳ್ಳಿಯ ಹೆಂಗಸರ ಬಗ್ಗೆಯೂ, ಇದನ್ನು ಸಾಧ್ಯಗೊಳಿಸಿದ ನಮ್ಮ ಮೆಚ್ಚಿನ ರಂಗಕರ್ಮಿ ಲೇಖಕ ಚಿಂತಕ ಪ್ರಸನ್ನನ ಸಾಹಸದ ಬಗ್ಗೆಯೂ ಕೊಚ್ಚಿಕೊಂಡಿದ್ದೆ.

ಆದರೆ ವನಸ್ಪತಿ ಲೋಕದಿಂದಲೂ ಹಳ್ಳಿಯ ಕುಶಲ ಬೆರಳುಗಳಿಂದಲೂ ಸೃಷ್ಟಿಯಾದ ಈ ಕುರ್ತಾ ತೊಟ್ಟ ನನ್ನನ್ನು ಒಳಗೆ ಬಿಡುವಂತಿಲ್ಲ ಎಂದು ಗೇಟಿನಲ್ಲೇ ಬ್ಯಾಂಗಲೂರ್‌ ಕ್ಲಬ್ಬಿನ ಅಧಿಕಾರಿಗಳು(ಕಾವಲಿನವರು) ತಡೆದರು. `ಶರ್ಟ್‌ ಧರಿಸದವರಿಗೆ ಇಲ್ಲಿ ಪ್ರವೇಶವಿಲ'್ಲ ಎಂದರು. ಹೀಗೆ ಹೇಳಿದವರು ನನ್ನ ಬಣ್ಣದವರೇ. ಸುಳ್ಳು ಸೌಜನ್ಯಕ್ಕೆ ಅಪರಿಮಿತವಾದ ಅವಕಾಶವಿರುವ ಇಂಗ್ಲಿಷನ್ನು ಮಾತಾಡುವ ನಮ್ಮ ಊರಿನವರೇ. ಪಾಪ, ತಮ್ಮ ಭಾಷಾ ಸಾಧನೆಗೆ ತಕ್ಕ ಸಂಬಳ ಪಡೆಯುವ ಈ ಟೆರಿಲೀನ್‌ ನುಣುಪಿನ ಸೂಟ್‌ಧಾರಿ ಕ್ಲಬ್‌ ಕಾರ್ಮಿಕರ ಜೊತೆ ಹೇಗೆ ಜಗಳವಾಡಲಿ? ನಾನು ಎಲ್ಲಿದ್ದೇನೆಂದು ನನಗೇ ಆಶ್ಚರ್ಯವಾಯಿತು. ಇಲ್ಲಿಗೆ ಬಂದದ್ದೇ ತಪ್ಪೆನ್ನಿಸಿ ನನಗೇ ನಾನು ಹೀಗೆ ಅಂದುಕೊಂಡೆ.

***

ಉಸಿರಾಡಲು ಅವಕಾಶವಿಲ್ಲದಂತೆ ಬೆಳೆದಿರುವ ಈ ನಗರದಲ್ಲಿ ಆ ಕ್ಲಬ್ಬನ್ನು ಸರ್ಕಾರ ಜನಹಿತಕ್ಕಾಗಿ ವಶಪಡಿಸಿ ಕೊಳ್ಳಬೇಕು. ಅಲ್ಲಿರುವ ಬಿಲ್ಡಿಂಗುಗಳನ್ನು ಕೆಡವಬೇಕು. ಮರಗಳನ್ನು ನೆಡಬೇಕು. ಸೂಟು ಹಾಕಿದವರಿಗೂ ಮತ್ತು ಅವರ ಸೂಟಿನಲ್ಲಿ ಕನ್ನಡ ಬಾರದಂತಾದವರಿಗೂ, ಜೊತೆ ಯಲ್ಲೇ ಪಂಚೆಯುಟ್ಟ, ಪೈಜಾಮಾ-ಕುರ್ತಾ ತೊಟ್ಟ, ಸಲ್ವಾರ್‌ ಕಮೀಸ್‌ ತೊಟ್ಟ , ಸೀರೆಯುಟ್ಟ ಎಲ್ಲರಿಗೂ, ಚಡ್ಡಿ ತೊಟ್ಟ ಮಕ್ಕಳಿಗೂ, ಕಡಲೆಕಾಯಿ ಮಾರಾಟ ಮಾಡುವವರಿಗೂ, ಓಡಾಡುವ ನೆರಳಿನ ಪಾರ್ಕಾಗಿ ಈ ಶ್ರೀಮಂತರ ರಿಸರ್ವೇಶನ್ನನ್ನು ಪರಿವರ್ತಿಸಬೇಕು. (ಬೇಕೆಂದೇ ನಾನು ರಿಸರ್ವೇಶನ್‌ ಪದವನ್ನು ಇಲ್ಲಿ ಬಳಸಿದ್ದೇನೆ) ಮರದ ನೆರಳಿನಲ್ಲಿ ಕೂತು ಹುರಿದ ನೆಲಗಡಲೆಯನ್ನು ಬಿಡಿಸಿ ನಿಧಾನವಾಗಿ ತಿನ್ನುತ್ತ ಹರಟುವುದು ಕನ್ನಡಿಗರ ಖುಷಿ. ಸುಲಿದದ್ದನ್ನು ಪಕ್ಕದಲ್ಲಿ ಸುಮ್ಮನೇ ಕೂತ ಸೂಟುಧಾರಿಗೂ ತಿನ್ನಲು ಕೊಡುವುದು ನಮ್ಮ ಸಂಪ್ರದಾಯ.

ನನ್ನ ಮಾತುಗಳು ಎತ್ತೆತ್ತಲೋ ಹರಿದಂತೆ ಕಂಡರೂ, ಈ ಮಾತುಗಳು ನನ್ನನ್ನು ಓದಿದವರಿಗೆ ಪುನರಾವರ್ತನೆ ಎನ್ನಿಸಿದರೂ-ಕುರ್ತಾಕ್ಕೆ ಅವಕಾಶವಿಲ್ಲದ ಬ್ಯಾಂಗಲೂರ್‌ ಕ್ಲಬ್‌, ಸಾಮಾನ್ಯ ಶಾಲೆಗಳಲ್ಲಿ ಸಮಾನ ಶಿಕ್ಷಣ, ದಲಿತ ರೈತರ ಹೋರಾಟ, ಸಾವಯವ ಕೃಷಿ, ಮೇಧಾಪಾಟ್ಕರ್‌ ಕಮ್ಯುನಿಸ್ಟ್‌ ಬಂಗಾಳದಲ್ಲಿ ನಡೆಸಿರುವ ಹೋರಾಟ- ಇವೆಲ್ಲವನ್ನೂ ಒಂದೇ ಸಮಸ್ಯೆಯೆಂಬಂತೆ ನಾನು ನೋಡಲು, ನೋಡಿದ್ದನ್ನು  ನಿಮಗೆ ಕಾಣಿಸಲು ಮತ್ತೆ ಮತ್ತೆ ಪ್ರಯತ್ನಿಸುತ್ತೇನೆ.

ನನ್ನೀ ಚಿಕ್ಕ ಪ್ರತಿಕ್ರಿಯೆಯನ್ನು ತಮ್ಮ ಲೇಖನದಲ್ಲಿ ನನಗೆ ಒಪ್ಪಿಗೆಯಾಗಿರುವ ಅಂಶಗಳಿಂದ ಆರಂಭಿಸುತ್ತೇನೆ.

  1. ಚಲಿಸದ ಭಾಷೆಯ ಸೃಜನಶೀಲತೆ ಮತ್ತು ಅದರ ಮೇಲೆ ನಮಗಿರಬೇಕಾದ ಆತ್ಮವಿಶ್ವಾಸ
  2. ಕನ್ನಡ-ಇಂಗ್ಲೀಷ್‌ ಕಲಿಕೆಯ ಕುರಿತ ತಮ್ಮ ಸಲಹೆಗಳು (ಪ್ಯಾರಾ 4)
  3. ಬಡ-ಶ್ರೀಮಂತ ಮಕ್ಕಳು ಒಂದೇ ಶಾಲೆಯಲ್ಲಿ ಓದುವುದರಿಂದ ನಾವು ಸಾಧಿಸಬಹುದಾಗಿದ್ದ ಸಾಂಸ್ಕೃತಿಕ ಶ್ರೀಮಂತಿಕೆ. (ಕೆಲ ತಿಂಗಳುಗಳ ಹಿಂದೆ ನಾನು ಮೈಸೂರಿನಲ್ಲಿದ್ದಾಗ ಕಾಫಿ-ತಿಂಡಿ ಕಾರ್ಯಕ್ರಮದಲ್ಲಿ ಅಬ್ದುಲ್‌ ರಶೀದರು ನಡೆಸಿದ ತಮ್ಮ ಸಂದರ್ಶನ ಕೇಳಿದೆ. ತಮ್ಮ ಶಾಲೆಯ ಒಬ್ಬ ಪಿಯೋನ್‌ ತಮಗೂ ಕುವೆಂಪುಗೂ ಲಿಂಕ್‌ ಕಲ್ಪಿಸಿದ ಎನ್ನುವುದನ್ನು ತಿಳಿದು ಸಂತಸ ಪ್ಟದ್ದೆ. ನೇರವಾಗಿ ಇದಕ್ಕೆ ಸಂಬಂಧವಿಲ್ಲದಿದ್ದರೂ, ಎಲ್ಲ ವರ್ಗಗಳು ಕಲಿಯಬಹುದಾದ ಶಾಲೆಗಳಲ್ಲಿ ಮಾತ್ರ ಇದು ಸಾಧ್ಯ ಅನ್ನಿಸುತ್ತಿದೆ)
  4. ಇಂಗ್ಲೀಷ್‌ ಮಾಧ್ಯಮದ ಶಾಲೆಗಳಲ್ಲಿ ಕನ್ನಡ ಕಡ್ಡಾಯ ಕಲಿಯಸಬೇಕಾಗಿರುವುದು. ಇಲ್ಲಿ ಮತ್ತೊಂದು ಸಂಬಂಧಿತ ವಿಷಯ ಪ್ರಸ್ತಾಪಿಸಲೆತ್ನಿಸುತ್ತೇನೆ. ಸಾಮಾನ್ಯವಾಗಿ ಕನ್ನಡೇತರರು ಕನ್ನಡ ಕಲಿಯುವುದಿಲ್ಲ ಎನ್ನುವ ಆರೋಪವಿದೆ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಕನ್ನಡಿಗರು ಕನ್ನಡ ಕಲಿಯುವುದಕ್ಕೆ ಬೇಕಾದ ಸೌಲಭ್ಯ ಕಲ್ಪಿಸಿಲ್ಲ ಎನ್ನುವುದು ನನ್ನ ಅಭಿಮತ. ಬೆರಳೆಣಿಕೆಯಷ್ಟು ಕನ್ನಡೇತರರು ಶಾಲೆಯಲ್ಲಿ ಕನ್ನಡವನ್ನು ವಿರೋಧಿಸಿಯಾರು. ಇದಕ್ಕೆ ವಿರುದ್ಧವಿರುವುದು ವಾಣಿಜ್ಯದತ್ತ ಗಮನ ಹೆಚ್ಚಿರುವ ಕನ್ನಡಿಗರು ಮತ್ತು ಶಾಲೆಗಳನ್ನು ನಡೆಸುವ ಕೆಲ ಕನ್ನಡೇತರರು. ಈಗಲೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕನ್ನಡ ಕಲಿಯುವ ಸೌಲಭ್ಯವನ್ನು ಬಡಾವಣೆಗಳಲ್ಲಿ ಎಲ್ಲರಿಗೂ ಹತ್ತಿರವಿರುವ ರೀತಿಯಲ್ಲಿ ಸೃಷ್ಟಿಸಿದರೆ ಸೋಜಿಗವೆನಿಸುವಷ್ಟು ಬದಲಾವಣೆಯಾದೀತು.
  5. ಯಾವುದು ಏನೇ ಇದ್ದರೂ, ಜಾಗತಿಕ ವಾಣಿಜ್ಯವೆನ್ನುವುದು ಇಂಗ್ಲೀಷ್‌-ಗೆ ಯಜಮಾನಿಕೆಯನ್ನೂ, ಲಯಕಾರನ ತಾಂಡವಶಕ್ತಿಯನ್ನು ಕೊಟ್ಟಿದೆ. ಚಿಕ್ಕ ಚಿಕ್ಕ ನಡೆಗಳಿಂದ ಇದನ್ನು ಎದುರಿಸುವುದು ಸಾಧ್ಯವಿಲ್ಲ.
  6. ಬೆಂಗಳೂರು ಕ್ಲಬ್‌-ಅನ್ನು ಬದಲಾಯಿಸಬೇಕಾದ ಅವಶ್ಯಕತೆ.

ತಮ್ಮ ಲೇಖನದ ಮಿಕ್ಕ ಕೆಲ ಮಹತ್ವದ ಪಕಲ್ಪನೆಗಳು, ಶಕ್ತವಾದ ವಿಚಾರಗಳು ಇನ್ನಷ್ಟು ಚರ್ಚೆಯಾಗಬೇಕಾದ ಅವಶ್ಯಕತೆಯಿದೆ. ಈ ಕುರಿತು ನನ್ನ ಅನಿಸಿಕೆಗಳು ಹೀಗಿದೆ.

  1. ಭಾಷೆ ಉಳಿಸುವವರು ಮತ್ತು ಭಾಷೆ ಬೆಳೆಸುವವರು ಎನ್ನುವ ಪರಿಕಲ್ಪನೆಗಳನ್ನು ನಾವು ಚರ್ಚಿಸಬೇಕಿದೆ. ನಮ್ಮ ಒಟ್ಟು ಭವಿಷ್ಯ ಪ್ರಾಯಶಃ ಈ ಗ್ರಹಿಕೆಯನ್ನು ನಾವು ಯಾವ ರೀತಿ ಸ್ವೀಕರಿಸಿ, ಚರ್ಚಿಸಿ, ಮುಂದುವರೆಸುತ್ತೇವೆ ಎನ್ನುವುದರ ಮೇಲೆ ನಿಂತಿದೆಯೆನ್ನಿಸುತ್ತದೆ. ಯಾಕೆಂದರೆ ಹೀಗೆ ನಾವು ಕನ್ನಡ ಮಾತ್ರ ಬಲ್ಲಂತಹವರು ಇನ್ನು ಮುಂದೆ ಇರುವುದು ನ್ಯಾಯವಲ್ಲ ಎನ್ನುವಂತಹ ಪರಿಸ್ಥಿತಿಯನ್ನು ಮುಟ್ಟಿದ್ದೇವೆ. ಪ್ರತಿಯೊಬ್ಬರಿಗೂ ಇಂಗ್ಲೀಷ್‌ ಕಲಿಸಲೇಬೇಕಾದ ಚಾರಿತ್ರಿಕ ಘಟ್ಟದಲ್ಲಿದ್ದೇವೆ. ಕನ್ನಡ ಮಾತ್ರ ಬಲ್ಲವರು ಮಾತ್ರ ಭಾಷೆ ಉಳಿಸಬಲ್ಲರು ಎನ್ನುವುದನ್ನು ಒಪ್ಪಿಕೊಂಡರೆ, ನಮ್ಮ ಕನ್ನಡ ಸಂಘಟನೆಗಳು ಮತ್ತೂ ಹೆಚ್ಚು ಮೂಲಭೂತವಾದೆಡೆಗೆ ಸಾಗುತ್ತಾರೇನೋ ಎನ್ನುವ ಆತಂಕವಿದೆ ನನಗೆ.
  2. ಸ್ವೀಡಿಷ್‌-ಇಂಗ್ಲೀಷ್‌-ಗೆ ಸಾಧ್ಯವಾಗಿರುವ ಆರ್ಥಿಕ-ಸಾಂಸ್ಕೃತಿಕ ಸಮರಸದ ಸಂಬಂಧ ಸಾಧ್ಯವೆನ್ನುವುದು ಗಮನಾರ್ಹವಾದ ವಿಷಯ. ಭಾರತಕ್ಕೆ ಅದೊಂದು ಆಶಾಕಿರಣವೇ ಸರಿ. ಆದರೆ, ಪ್ರೊಫೆಸರ್‌ ರಾದಾ-ರ ಈ ವಾದ ಚರಿತ್ರೆಯ ಒಂದು ಬಿಂದುವಿನ ಕುರಿತಾಗಿದೆ. ಯಾವ ಚಾರಿತ್ರಿಕ ಚಲನೆ ಸ್ವೀಡನ್ನಿಗೆ ಇದನ್ನು ಸಾಧ್ಯವಾಗಿಸಿತು ಎನ್ನುವುದು ಮುಖ್ಯ ಎಂದು ನನಗನ್ನಿಸಿದೆ. ಇವತ್ತಿನ ಜಾಗತಿಕ ಚಾರಿತ್ರಿಕ ಚಲನೆಯೆನ್ನುವುದು ಯಾವ ದಿಕ್ಕಿನಲ್ಲಿದೆ? ಇಡಿಯ ಯುರೋಪು ಯಾವ ದಿಕ್ಕಿನಲ್ಲಿದೆ? ಸ್ಕ್ಯಾಂಡಿನೇವಿಯಾದ ದೇಶಗಳು ಯಾವ ದಿಕ್ಕಿನಲ್ಲಿವೆ? ಎನ್ನುವುದು ಹೆಚ್ಚು ಮುಖ್ಯವಾಗುತ್ತದೆ. ಆದ್ದರಿಂದ ಇವತ್ತಿನ ಭಾರತ ಎದುರಿಸುತ್ತಿರುವ ಸದ್ಯದ ಸವಾಲು ಯಾವ ಚಾರಿತ್ರಿಕ ಚಲನೆಯ ಪರಿಣಾಮ ಮತ್ತು ಯಾವ ಚಾರಿತ್ರಿಕ ಚಲನೆಯನ್ನೆದಿರಿಸಿ ಗೆಲ್ಲಬೇಕಿದೆ ಎನ್ನುವುದು ಮುಖ್ಯವಾಗುತ್ತದೆ. ಸ್ವೀಡನ್‌ ಭಾಷೆಯ ಕುರಿತು ಆತಂಕ ಇದ್ದಿರಲಾರದ ಒಂದು ಶಾಂತಿ ಕಾಲದಲ್ಲಿ ಈ ಸಮತ್ವವನ್ನು ಸಾಧಿಸಿಕೊಂಡಿದೆ. ಆದರೆ ಭಾರತ ಆತಂಕದಲ್ಲಿ, ಘರ್ಷಣೆಯಲ್ಲಿ ಇದನ್ನು ಸಾಧಿಸಿಕೊಳ್ಳಬೇಕಿದೆ. ಸ್ವೀಡನ್ನಿನ ಉದಾಹರಣೆ ನಮಗೆ ಸಹಾಯ ಮಾಡುತ್ತದೆಯೇ ಎನ್ನುವ ಕಳಕಳಿಯಿಂದ ಈ ವಾದವನ್ನು ಮಂಡಿಸುತ್ತಿದ್ದೇನೆ.
  3. ನನ್ನ ಮನಸ್ಸಿನಲ್ಲೊಂದು ವಾದವಿದೆ. ಇದನ್ನು ಬೆಳೆಸಬೇಕಾಗಿದೆ. ಅದೇನೆಂದರೆ, ನಮ್ಮಲ್ಲಿ ಇಂಗ್ಲೀಷನ್ನು ದಕ್ಷವಾಗಿ ಬಳಸಬಲ್ಲವರ ಇಂಗ್ಲೀಷ್‌ ಕೂಡಾ ಸಾಂಸ್ಕೃತಿಕವಾಗಿ ದರಿದ್ರವಾಗಿರುತ್ತದೆ. ತಮ್ಮ ಇಂಗ್ಲೀಷ್‌-ಗೆ ಸಾಂಸ್ಕೃತಿಕ ಶ್ರೀಮಂತಿಕೆ ಬೇಕಾದರೆ ಕನ್ನಡದಂತಹ ದೇಶೀಯ ಭಾಷೆಗಳ ಜೊತೆ ಸೃಜನಶೀಲ ಸಂಬಂಧ ಹೊಂದಿರಬೇಕಾಗುತ್ತದೆ. ಉದಾಹರಣೆಗೆ ರಾಜಾರಾಯರು. ಇಲ್ಲದಿದ್ದರೆ ಇವರ ಇಂಗ್ಲೀಷ್‌ ಎಂದೆಂದಿಗೂ ಗುಲಾಮವಾಗುತ್ತದೆ. ಅವರು ಔದ್ಯೋಗಿಕವಾಗಿ ಮುಂದುವರೆಯಬಹುದು. ಆದರೆ ಸಾಂಸ್ಕೃತಿಕವಾಗಿ ಮುಂದುವರೆಯಲಾರರು. ಸಂಸ್ಕೃತಿ ನಿರ್ಮಾಪಕರಿಗೆ ಗತದ ಜೊತೆಗೆ ಆಳವಾದ ಸಂಬಂಧ ಇರಲೇಬೇಕಾಗುತ್ತದೆ. ಆದರೆ ಕನ್ನಡವನ್ನು ಅಡುಗೆಮನೆ ಭಾಷೆ೦ಾಗಿ ಬಳಸುವವರಿಗೆ ಇದು ಸಾಧ್ಯವಾಗುವುದಿಲ್ಲ. ಈ ನನ್ನ ವಾದ ಎಷ್ಟು ಸರಿ ಎನ್ನುವುದನ್ನು ನನಗೆ ನಾನೇ ಸ್ಪಷ್ಟಪಡಿಸಿಕೊಳ್ಳುತ್ತಿದ್ದೇನೆ.
  4. ಒಂದು ಭಾಷೆಯಲ್ಲೇ ಜ್ಞಾನದ ಸೃಷ್ಟಿಯಾಗುವುದು ಮತ್ತು ಭಾಷೆಯ ಉಳಿವು ಅದರ ಮೇಲೆ ಅವಲಂಬಿತವಾಗಿರುವುದು ಸಹ ತುಂಬಾ ಮೂಲಭೂತವಾದ ವಿಷಯ. ಈ ವಾದವನ್ನು ಎದುರಿಸುವ ರೀತಿ ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ. ಒಂದು ಮುಖ್ಯವಾದ ವಿಷಯವೆಂದರೆ ಹೀಗೆ ಹುಟ್ಟುವ ಜ್ಞಾನಕ್ಕೆ ಆರ್ಥಿಕ ಆಯಾಮಗಳಿರಬೇಕಾಗುತ್ತದೆ. ಅಥವ ಮತ್ತಿನ್ಯಾವ ಕಾರಣಕ್ಕಾದರೂ ಇಂಗ್ಲೀಷ್‌-ಗಿಂತ ಮೇಲು ಎನ್ನುವ ಹಣೆಪಟ್ಟಿ ಪಡೆಯಬೇಕಾಗುತ್ತದೆ. ಮತ್ತೊಂದು ದೃಷ್ಟಿಯಿಂದ ನೋಡಿದರೆ ಅತ್ಯುತ್ತಮ ಸಾಹಿತ್ಯ ಸೃಷ್ಟಿ ಕೂಡ ಜ್ಞಾನದ ಒಂದು ಭಾಗವೇ ಸರಿ. ಆದರೆ ಇದಕ್ಕೆ ನಾವು ಆರ್ಥಿಕ/ಔದ್ಯೋಗಿಕ ಆಯಾಮ ಕಲ್ಪಿಸಲು ಸಾಧ್ಯವಿಲ್ಲದಿರುವುದನ್ನು ಗಮನಿಸಿದರೆ, ನಮ್ಮ ಮುಂದಿರುವ ಸವಾಲು ಸ್ಪಷ್ಟವಾಗುತ್ತದೆ.
  5. ನೀವು ಆಗಾಗ್ಗೆ ಗಮನಿಸುವ ದಣಿವು ಪರಿಕಲ್ಪನೆಯನ್ನು ಇಲ್ಲಿ ತರಲು ಇಚ್ಛಿಸುತ್ತೇನೆ, ಸಾಂಸ್ಕೃತಿಕ ದಣಿವು ಎಂದು ಇದನ್ನು ಸ್ವಲ್ಪ ಬದಲಾಯಿಸಿಕೊಂಡು. ಸಂಸ್ಕೃತ ಕನ್ನಡಕ್ಕೆ ದಾರಿ ಮಾಡಿಕೊಟ್ಟಂತೆ ಇವತ್ತು ಇಂಗ್ಲೀಷ್‌ ಕನ್ನಡಕ್ಕೆ ದಾರಿಮಾಡಿಕೊಡಬೇಕಾದರೆ ನಮ್ಮಲ್ಲಿ ಈ ದಣಿವು ವ್ಯಾಪಕವಾಗಿ ಮತ್ತು ಆಳವಾಗಿ ಎಲ್ಲರಿಗೂ ಅನುಭವವಾಗಬೇಕು. ಮತ್ತು ಅದೇ ಕಾಲದಲ್ಲಿ ದಾರ್ಶನಿಕರು ಹುಟ್ಟಬೇಕು. ಹೀಗೇನಾದರೂ ಆಗಬಹುದು ಎನ್ನುವ ಒಂದು ಆಶಾವಾದ ನನ್ನಲ್ಲಿದೆ.
  6. ಆಸ್ಟ್ರೇಲಿಯಾದ ಬುಡಕಟ್ಟಿನ ಲೇಖಕನ ಮಾತುಗಳು ಕೂಡಾ ನನ್ನಲ್ಲಿ ಅಪಾರವಾದ ಆಶೆ ಮೂಡಿಸಿದೆ. ಆದರೆ ಇದು ಮಾರಣಹೋಮದ ನಂತರವೂ ಉಳಿಯುವ ಭರವಸೆ. ಇದನ್ನು ಗಮನದಲ್ಲಿಟ್ಟುಕೊಂಡೂ ಸದ್ಯ ಮಾರಣಹೋಮವಾಗದ ರೀತಿಗಳ ಬಗ್ಗೆ ಮಾತ್ರ ಗಮನಿಸಲು ಇಚ್ಛಿಸುತ್ತೇನೆ.
  7. ಇವತ್ತಿನ ವಾಣಿಜ್ಯ ನಮ್ಮ ದೇಶೀಯ ಭಾಷೆಗಳ ಕುರಿತಾದ ಆತಂಕಕ್ಕೆ, ಅನೇಕ ಸಮುದಾಯಗಳ ದುರವಸ್ಥೆಗೆ ಕಾರಣ ಎನ್ನುವುದು ಸ್ಪಷ್ಟ. ಆದರೆ ವಾಣಿಜ್ಯದವರಿಗೆ ಈ ವಿಷಯಗಳಲ್ಲಿ ಹುನ್ನಾರಗಳಿರುತ್ತವೆಯೋ ಇಲ್ಲವೋ ಹೇಳುವುದು ಕಷ್ಟ. ಆದರೆ ಅವರ ಗಮನವೆಲ್ಲವೂ ಹಣದ ಹರಿಯುವಿಕೆಯತ್ತ ಇರುತ್ತದೆ. ಒಳ್ಳೆಯದಾದರೂ, ಕೆಟ್ಟದಾದರೂ ಹಣಗಳಿಸುವ ಪ್ರಕ್ರಿಯೆಯ ಬೈಪ್ರಾಡಕ್ಟಾಗಿ ಆಗುತ್ತದೆ. ಈ ವ್ಯತ್ಯಾಸವನ್ನೇಕೆ ಗಮನಿಸುತ್ತಿದ್ದೇನೆಂದರೆ, ವಾಣಿಜ್ಯದ ಅನೇಕರಿಗೆ ಒಳನೋಟದ ಕೊರತೆಯಿರುತ್ತದೆ, ವಾಣಿಜ್ಯೇತರ ವಿಷಯಗಳ ಕುರಿತಾದ ಇನ್‌ಡಿಫರೆನ್ಸ್‌ ಇರುತ್ತದೆ. ಇನ್ನು ಮಿಕ್ಕವರಿಗೆ ಮನುಷ್ಯತ್ವವನ್ನು ಮೀರಿದ ಮಹತ್ವಾಕಾಂಕ್ಷೆಯಿರುತ್ತದೆ. ನಾವು ಎರಡನೇಯವರನ್ನು ಟೀಕಿಸುವ ಭರದಲ್ಲಿ ಮೊದಲನೇಯವರನ್ನು ಕಳೆದುಕೊಳ್ಳುತ್ತೇವೆ. ಅಥವಾ ಈ ಎರಡನ್ನೂ ಬೇರೆ ಬೇರೆ ರೀತಿಗಳಲ್ಲಿ ಟೀಕಿಸಬೇಕಾಗುತ್ತದೆ.
  8. ಬೆಂಗಳೂರು ಕ್ಲಬ್‌-ನ ಈ ನಿಯಮ ನಿಮ್ಮ ಸ್ನೇಹಿತರಿಗೆ ಗೊತ್ತಿಲ್ಲದ್ದೂ, ನಿಮಗೆ ಗೊತ್ತಿಲ್ಲದ್ದೂ ನನಗೆ ಆಶ್ಚರ್ಯ ತಂದಿದೆ. ಮತ್ತು ಇದೇನೂ ಮುಖ್ಯ ವಿಷಯವಲ್ಲ ಎಂದು ಸುಮ್ಮನಿರದೇ ತಮ್ಮ ಲೇಖನದಲ್ಲಿ ಪ್ರಸ್ತಾಪಿಸುತ್ತಿರುವುದಕ್ಕೆ ನನಗೆ ಸಂತಸವಾಗಿದೆ. ಆದರೆ ನೀವು ಹೇಳುತ್ತಿರುವ ವಿಧಾನ ಅನುಸರಿಸುವುದಕ್ಕೆ ಹೋದರೆ ಕೋರ್ಟಿನಲ್ಲಿ ಸೋಲುಂಟಾಗುತ್ತದೆ, ಅಲ್ಲವೆ? ಇಂಥದ್ದರ ಕುರಿತಾದ ಪ್ರತಿಭಟನೆ ವಿಶಿಷ್ಟವಾದ ರೀತಿಯಲ್ಲಾಗಬೇಕಿದೆ. ಇಲ್ಲದಿದ್ದರೆ ಒಂದೋ ಕನ್ನಡ ಸಂಘಟನೆಗಳು ಇಲ್ಲವೋ ಬಲಪಂಥೀಯರು ಇದನ್ನೂ ಹೈಜಾಕ್‌ ಮಾಡುತ್ತಾರೆ.
  9. ದಯವಿಟ್ಟು ಬಂಗಾಲದ ಸಿಂಗೂರ್‌ ಹೋರಾಟದ ಬಗ್ಗೆ ಈಗಲೇ ಯಾವ ನಿರ್ಧಾರಕ್ಕೂ ಬರಬಾರದಾಗಿ ವಿನಂತಿ. ಒಟ್ಟು ವಿಷಯವನ್ನು ಅನೇಕ ವಿವರಗಳಲ್ಲಿ ಚರ್ಚಿಸಬೇಕಿದೆ. ಇತ್ತೀಚಿನ ಮೇಧಾರ ರೀತಿ-ನೀತಿಗಳು ಇವತ್ತಿನ ಸಮಸ್ಯೆಗಳನ್ನು ಸರಿಯಾದ ರೀತಿಯಲ್ಲಿ ಎದುರಿಸುತ್ತಿದೆಯೇ ಎನ್ನುವುದರ ಕುರಿತು ಅನೇಕರಿಗೆ ಕೆಲ ಅನುಮಾನಗಳಿವೆ. ಮೇಧಾ ಪಾಟ್ಕರ್‌ ಕುರಿತಾಗಿ ಎಂ.ಎಸ್‌.ಶ್ರೀರಾಂ. ತಮ್ಮ ಬ್ಲಾಗಿನಲ್ಲಿ ಒಂದು ಲೇಖನ ಬರೆದಿದ್ದಾರೆ. ಮಧು ಕೀಶ್ವರ್‌ ಔಟ್ಲುಕ್‌ ಪತ್ರಿಕೆಯಲ್ಲಿ ತೀವ್ರವಾದ ಟೀಕೆಗಳುಳ್ಳ ಲೇಖನವೊಂದನ್ನು ಬರೆದಿದ್ದಾರೆ. ಇದು ಗಮನಾರ್ಹವಾದ ಒಳನೋಟಗಳನ್ನು ಸ್ವಲ್ಪಮಟ್ಟಿಗಿನ ಭಿನ್ನಮತವನ್ನು ಕಾಣಿಸುತ್ತದೆ.

ನಿಮ್ಮ ಲೇಖನ ನಿತ್ಯ-ಸದ್ಯಗಳ ಮಿಶ್ರಣವಾಗಿರುವುದು ನನಗೆ ಸಂತಸ ತಂದಿದೆ. ಲೇಖನದಲ್ಲಿ ನನಗೆ ಕಾಣದೇ ಹೋದ ಅಂಶಗಳು ಹೀಗಿವೆ.

  1. ಮೊನ್ನಿನ ಬೇಂದ್ರೆ ಕಾವ್ಯ ವಾಚನದಲ್ಲಿ ಜಯಂತ್‌ ಕಾಯ್ಕಿಣಿಯವರು ಬೇಂದ್ರೆಯವರ ಕನ್ನಡವು ಹೊಸಬಾಳನ್ನು ಕನ್ನಡಿಸಬೇಕು ಎನ್ನುವ ವಾಕ್ಯವನ್ನು ಉದ್ಧರಿಸಿದರು. ಈ ಅಂಶವೂ ಸಹ ತಮ್ಮ ಲೇಖನದಲ್ಲಿ ವಿವರವಾಗಿ ಬಂದರೆ ಚೆನ್ನಾಗಿರುತ್ತದೆ ಎನ್ನುವುದು ನನ್ನ ಅಭಿಮತ. ಕನ್ನಡದಲ್ಲಿ ಜ್ಞಾನದ ಸೃಷ್ಟಿ ಎನ್ನುವುದು ಹೊಸಬಾಳನ್ನು ಕನ್ನಡಿಸಬೇಕು ಎನ್ನುವದರ ಭಾಗವೇ ಆದರೂ, ಈ ಅಂಶ ಇನ್ನಷ್ಟು ವಿಶದವಾಗಿ ಬಂದರೆ ಒಳಿತೆನ್ನಿಸುತ್ತದೆ. ಆದರೆ ಹೇಗೆ ಎನ್ನುವುದು ನನಗೆ ಸ್ಪಷ್ಟವಿಲ್ಲ.
  2. ಕನ್ನಡ ಮಾಧ್ಯಮದಲ್ಲಿ ಓದುತ್ತಿರುವವರಿಗೆ ತಮ್ಮ ಭಾಷಿಕ ಸೃಜನಶೀಲತೆಯ ಅರಿವಿಲ್ಲ. ಕನ್ನಡದಲ್ಲಿ ಅತ್ಯುತ್ತಮವಾಗಿ ಮಾತನಾಡಿ-ಬರೆದು-ಓದಬಲ್ಲ ಮತ್ತು ಇಂಗ್ಲೀಷನ್ನು ಕಾನ್ವೆಂಟು ಮಕ್ಕಳಷ್ಟೇ ಉತ್ತಮವಾಗಿ ಬರೆಯಬಲ್ಲ ನಮ್ಮ ಕನ್ನಡದ ಮಕ್ಕಳು ಇಂಗ್ಲೀಷ್‌ ಮಾತನಾಡುವುದಕ್ಕೆ ಬರದೇ ಇರುವುದನ್ನು ಅತಿಯಾಗಿ ಪರಿಗಣಸಿ ತಮ್ಮ ಸೃಜನಶೀಲತೆಯಲ್ಲಿ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಇಂಥವರಿಗೆ ಇಂಗ್ಲೀಷ್‌ ಮಾತನಾಡುವುದನ್ನು ಕಲಿಸುವುದು ಕಷ್ಟವೇ ಅಲ್ಲ. ಆದರೂ ದೊಡ್ಡ-ದೊಡ್ಡ ಪರಿಹಾರಗಳ ಚಿಂತನೆಯಲ್ಲಿ ನಾವು ಈ ಮಾರ್ಗಗಳತ್ತ ಗಮನ ಹರಿಸೇ ಇಲ್ಲ. (ಪೂರ್ತಿ ಸಮೀಕರಣ ಸರಿಯಲ್ಲವಾದರೂ, ತಮ್ಮ ಸ್ನೇಹಿತರಾದ ಎಡ್ವರ್ಡ್‌ ಅಪ್ವರ್ಡ್‌ ಜ್ಞಾಪಕ ಬರುತ್ತಿದ್ದಾರೆ. ಕಮ್ಯುನಿಸ್ಟ್‌ ಮಾರ್ಗದ ತಮ್ಮ ನಂಬಿಕೆಯಲ್ಲಿ ತಮ್ಮ ಸೃಜನಶೀಲತೆಯ ಬಗ್ಗೆಯೇ ಅಪನಂಬಿಕೆ ಸೃಷ್ಟಿಸಿಕೊಂಡ ಅವರ ಬಗ್ಗೆ ತಮ್ಮ ಲೇಖನದಲ್ಲಿ ಓದಿದೆ. ಅದೇ ರೀತಿ ನಮ್ಮ ಹುಡುಗರು ಕನ್ನಡದಲ್ಲಿ ಸೃಷ್ಟಿಸಬಹುದಾದ, ಗ್ರಹಿಸಬಹುದಾದ, ಇಂಗ್ಲೀಷಿನಲ್ಲಿ ಬರೆಯುಬಹುದಾದ ಶಕ್ತಿಯನ್ನು ಇಂಗ್ಲೀಷ್‌ ಮಾತನಾಡಲಾರದ ಸ್ಥಿತಿಯಿಂದ ಬಂದಿರುವ ಕೀಳರಿಮೆಯಲ್ಲಿ ಕಳೆಯುತ್ತಿದ್ದಾರೆ. ಇದಕ್ಕೆ ತಾತ್ವಿಕ ಚೌಕಟ್ಟನ್ನೊದಗಿಸಿ ಸದ್ಯದ ಕನ್ನಡವಾದವನ್ನು ಹೇಗೆ ಬೆಳೆಸಬಹುದು ಎಂದು ಯೋಚಿಸುತ್ತಿದ್ದೇನೆ.)
  3. ಮಧ್ಯಮ ವರ್ಗಕ್ಕೆ ಕನ್ನಡದ ಶಕ್ತಿ, ಇಂಗ್ಲೀಷನ್ನು ಕನ್ನಡದ ಮೂಲಕ ಕಲಿಯುವ ಸಾಧ್ಯತೆ ಇವುಗಳ ಮೇಲೆ ಮತ್ತೆ ಭರವಸೆಯುಂಟಾಗುವಂತೆ ಮಾಡುವುದು ಸಾಧ್ಯವಿಲ್ಲವೇ (ತಮ್ಮದೇ ಒಂದು ವಾಕ್ಯ ಜ್ಞಾಪಕ ಬರುತ್ತಿದೆ ಇಂಗ್ಲೀಷ್‌ ಕಲಿ, ಕನ್ನಡದಲ್ಲಿ ಕಲಿ)? ಈ ಸಾಧ್ಯತೆ ಇಲ್ಲವೇ ಇಲ್ಲ ಎಂದು ಎಲ್ಲರೂ ಕೈಚೆಲ್ಲಿರುವಂತಿದೆ. ತಮ್ಮ ಅಭಿಪ್ರಾಯವೂ ಹಾಗೇ ಇದೆಯೇ?

ನಮಸ್ಕಾರಗಳೊಂದಿಗೆ
ಶಿವು

Post new comment

The content of this field is kept private and will not be shown publicly.
CAPTCHA
This question is for testing whether you are a human visitor and to prevent automated spam submissions.
Image CAPTCHA
Copy the characters (respecting upper/lower case) from the image.